ಉಜಿರೆ: ಡಾ| ಬಿ.ಸಿ ರಾಯ್ ಅವರ ಸಮಾಜ ಸೇವೆ, ವೃತ್ತಿಯಲ್ಲಿ ಅವರಿಗಿದ್ದ ನಿಷ್ಟೆ, ಬಡವರ ಆರೋಗ್ಯದ ಕುರಿತು ಅವರಿಗಿದ್ದ ಕಾಳಜಿಯನ್ನು ಅವರ ಹುಟ್ಟು ಹಬ್ಬದ ದಿನವಾದ ಜುಲೈ ಒಂದರಂದು ಭಾರತದಾದ್ಯಂತ ವೈದ್ಯರ ದಿನವನ್ನಾಗಿ ಆಚರಿಸುವ ಮೂಲಕ ಅವರನ್ನು ಸ್ಮರಿಸಿಕೊಳ್ಳುತ್ತೇವೆ ಎಂದು ಎಸ್.ಡಿಎಂ ಅಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ.ಎಂ. ಕಾಶೀನಾಥ ಶೆಣೈ ಹೇಳಿದರು.

ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ವೇಳೆ ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಹೂಗುಚ್ಚ ನೀಡಿ ಸ್ವಾಗತಿಸಿ ಶುಭ ಹಾರೈಸಿದರು.

ಎಸ್.ಡಿ.ಎಂ ಆಸ್ಪತ್ರೆಯ ಹಿರಿಯ ವೈದ್ಯರುಗಳಾದ ಕಳೆದ 51 ವರ್ಷದಿಂದ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಬಾಲಕೃಷ್ಣ ಭಟ್, 50 ವರ್ಷಗಳಿಂದ ಪ್ರಸೂತಿ ತಜ್ಞೆಯಾಗಿ ಸಾವಿರಕ್ಕ್ಕೂ ಮಿಕ್ಕಿ ಸಹಜ ಹೆರಿಗೆ ಮಾಡಿಸಿದ ತಜ್ಞೆ ಡಾ.ಕಮಲಾ ಭಟ್ ಹಾಗೂ 55 ವರ್ಷಗಳಿಂದ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡ ಡಾ.ಎಂ.ಎಸ್ ಭಟ್ ಅವರನ್ನು ಸನ್ಮಾನಿಸಲಾಯಿತು.

ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ್ ಪೂವಣಿ ಅವರು ವೈದ್ಯರಿಗೆ ಶುಭ ಕೋರಿ, ಅಭಿನಂದನೆ ಸಲ್ಲಿಸಿದರು. ಅಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಎನ್. ಮನ್ಮಥ್ ಕುಮಾರ್ ಸ್ವಾಗತಿಸಿ. ಶುಭ ಹಾರೈಸಿದರು.