ಸುಬ್ರಹ್ಮಣ್ಯ: ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ‘ದೇಶದ ಪ್ರತಿಷ್ಠಿತ ಸಂಸ್ಥೆಗಳನ್ನು ಸೇರಿಸಿಕೊಂಡು ನಮ್ಮ ಭಾಗದ ಅಡಿಕೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅದಕ್ಕಾಗಿ 110 ಕೋಟಿಯನ್ನು ಮೀಸಲಿಟ್ಟಿದೆ’ ಎಂದು ಹೇಳಿದರು.
ಅವರು ಕಡಬ ತಾಲ್ಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದ ಕಿದು ಸಿಪಿಸಿಆರ್ಐನಲ್ಲಿ ನಡೆದ ಕೃಷಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಈ ಹಿಂದಿನ ಸರ್ಕಾರ ವರದಿ ನೀಡಿದ್ದರಿಂದ ಅಡಿಕೆಯ ಧಾರಣೆ ಇಳಿಕೆಯಾಗಿತ್ತು ಆದರೆ, ಅದರಿಂದ ಹಾನಿಯಾದ ನಿದರ್ಶನವಿಲ್ಲ ಎಂದರು.
ಅಮದು ಇಲ್ಲ: `ಪುನಃ ಅಡಿಕೆ ಆಮದು ಮಾಡಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದುದು. 2020-21ರಲ್ಲಿ ಭೂತಾನ್ನಿಂದ ಅಡಿಕೆ ಆಮದಿಗೆ ಅನುಮತಿ ನೀಡಲಾಗಿತ್ತು. ಈ ವರ್ಷ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಲು ಅನುಮತಿ ನೀಡಿಲ್ಲ. ಅಡಿಕೆ ಆಮದು ಮಾಡಲಾಗುತ್ತಿದೆ ಎಂಬ ಸುದ್ದಿ ಹಬ್ಬಿಸಿ, ದರ ಕುಸಿತ ಮಾಡಿ ಗೊಂದಲ ಸೃಷ್ಟಿಸುವ ಸಂಚು ನಡೆಯುತ್ತಿದೆ. ಇನ್ನು ಅಡಿಕೆಯ ಎಲೆಚುಕ್ಕಿ, ಹಳದಿ ಎಲೆ ರೋಗ ನಿರ್ವಹಣೆಗೆ 1225 ಕೋಟಿ ಅನುದಾನ ಕೋರಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಈ ಕುರಿತ ಅಧ್ಯಯನಕ್ಕೂ ಕೇಂದ್ರದಿಂದ ಕೋಟ್ಯಂತರ ರೂಪಾಯಿ ನೀಡಲಾಗಿದೆ’ ಎಂದರು.
`ಕಲ್ಪ ಸುವರ್ಣ’ ತಳಿ ಬಿಡುಗಡೆ: ಸಿಪಿಸಿಆರ್ಐ ಅಭಿವೃದ್ಧಿಪಡಿಸಿದ ‘ಕಲ್ಪ ಸುವರ್ಣ’ ಗಿಡ್ಡ ತಳಿಯ ತೆಂಗು ಗಿಡವನ್ನು ಶೋಭಾ ಕರಂದ್ಲಾಜೆ ಬಿಡುಗಡೆ ಮಾಡಿದರು. ವಿಟ್ಲ ಕೊಕ್ಕೊ ಹೈಬ್ರಿಡ್ 1, ವಿಟ್ಲ ಕೊಕ್ಕೊ ಹೈಬ್ರಿಡ್ 2 ತಳಿಯನ್ನು ಬಿಡುಗಡೆಗೊಳಿಸಿ ಕೃಷಿಕರಿಗೆ ವಿತರಿಸಲಾಯಿತು. ತರಬೇತುದಾರರಿಗೆ ಪ್ರಮಾಣ ಪತ್ರ, ಉಪಕರಣ, ಸುಧಾರಿತ ತೆಂಗಿನ ತಳಿಗಳ ಪ್ರಕಟಣೆಯನ್ನು ಬಿಡುಗಡೆಗೊಳಿಸಲಾಯಿತು.