ಸವಣಾಲು : ಕೆಲ ದಿನಗಳ ಹಿಂದೆ ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ಬೊಲ್ಲೊಟ್ಟು ಬೈಲು ಶ್ರೀಮತಿ ಬೇಬಿ ಹೆಗ್ಡೆ ಅವರ ಮನೆಯಿಂದ 14 ಕೋಳಿ ಕಳ್ಳತನ ನಡೆದಿತ್ತು. ಈ ಬಗ್ಗೆ ಅನೇಕರಲ್ಲಿ ವಿಚಾರಿಸಿದಾಗ ಸುಳಿವು ಸಿಕ್ಕಿರಲಿಲ್ಲ , ನಂತರ ಅವರು ಸುಮ್ಮನಾಗಿದ್ದರು .
ಇಂದು ಶ್ರೀಮತಿ ಬೇಬಿ ಹೆಗ್ಡೆ ಅವರ ಮಗ, ರಿಕ್ಸಾ ಚಾಲಕ ಹರೀಶ್ ಹೆಗ್ಡೆ ಎಂಬವರು ತನ್ನ ವನದುರ್ಗ ರಿಕ್ಷಾದಲ್ಲಿ ಬೆಳ್ತಂಗಡಿಯ ಹುಣಸೆಕಟ್ಟೆಗೆ ಬಾಡಿಗೆ ಹೋದಾಗ ಹುಣಸೆಕಟ್ಟೆಯ ರಿಕ್ಷಾ ಚಾಲಕರೊಬ್ಬರ ಮನೆಯ ಅಂಗಳದಲ್ಲಿ 5 ಕೋಳಿಗಳನ್ನು ಕಟ್ಟಿ ಹಾಕಿದ್ದರು.ಅದರಲ್ಲಿ ಒಂದು ಕೋಳಿಯ ಮೇಲೆ ಮುಂಗುಸಿ ಹಿಡಿದ ಗಾಯದ ಗುರುತು ಇದ್ದ ಕಾರಣ ಇದು ತನ್ನ ಮನೆಯ ಕೋಳಿ ಎಂದು ಹರೀಶ್ ಹೆಗ್ಡೆ ಗುರುತು ಹಚ್ಚಿದರು, ತಕ್ಷಣ ಅವರನ್ನು ವಿಚಾರಿಸಿದಾಗ ಇದು ತನಗೆ ಸವಣಾಲು ಗ್ರಾಮದ ಪಿಕಪ್ ಚಾಲಕ ಮತ್ತು ಅವರ ಅಣ್ಣನ ಮಗ ಮಾರಾಟ ಮಾಡಿದ್ದೆಂದು ಮಾಹಿತಿ ನೀಡಿದರು . ಈ ಬಗ್ಗೆ ಶಂಕಿತ ಆರೋಪಿಯನ್ನು ವಿಚಾರಿಸಲು ಕರೆ ಮಾಡಿದಾಗ ಆ ವ್ಯಕ್ತಿ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ನಿನಗೆ ಏನು ಮಾಡಲು ಸಾಧ್ಯ ಅದನ್ನು ಮಾಡು ಎಂದು ಹೇಳಿರುತ್ತಾರೆ.
ಈ ಬಗ್ಗೆ ಹರೀಶ್ ಹೆಗ್ಡೆ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು , ಪೊಲೀಸ್ ವಿಚಾರಣೆ ನಂತರವಷ್ಟೇ ನಿಜಾಂಶ ಬೆಳಕಿಗೆ ಬರಬೇಕಾಗಿದೆ . ಇನ್ನಾದರೂ ಇಂತಹ ಹಗಲು ಕಳ್ಳತನಕ್ಕೆ ಮುಕ್ತಿ ಸಿಗಲೆಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ.