ಬೆಳ್ತಂಗಡಿ : ಮಂಗಳೂರಿನಲ್ಲಿ ಶಂಕಿತ ಉಗ್ರ ಶಾರೀಕ್ ನಿಂದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ ಹಿಂದಿನ ದಿನ ಬೆಳ್ತಂಗಡಿಯ ಬೆಂದ್ರಾಳದಲ್ಲಿ ನಿಷೇಧಿತ ಸ್ಯಾಟ್ ಲೈಟ್ (ತುರಾಯ) ಫೋನ್ ಹೋಗಿರುವುದು ಬೆಳಕಿಗೆ ಬಂದಿದೆ.ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸರಿಂದ ಇಂದು ಬೆಂದ್ರಾಳ ಪ್ರದೇಶದಲ್ಲಿ ತನಿಖೆ ಮತ್ತಷ್ಟು ಚುರುಕುಗೊಳಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಿಂದ ನವಂಬರ್ 18 ರಂದು ನಿಷೇಧಿತ ಸ್ಯಾಟ್ ಲೈಟ್ ಫೋನ್(ತುರಾಯ) ಕರೆ ಹೋಗಿರುವ ಬಗ್ಗೆ ಕೇಂದ್ರ RAW ಅಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು ಅದರಂತೆ ಆಂತರಿಕ ಭದ್ರತಾ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೆ ತನಿಖೆ ಮಾಡಲು ಮಾಹಿತಿ ರವಾನಿಸಿದ್ದಾರೆ.
ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್ಸ್ಪೆಕ್ಟರ್ ಚಿಂದನಂದ್ ಮತ್ತು ತಂಡ ಶುಕ್ರವಾರ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇಂದು ಮತ್ತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ಮತ್ತು ತಂಡ ತೋಟತ್ತಾಡಿ ಗ್ರಾಮದ ಬಾರೆಮನೆ ನಿವಾಸಿಗಳಾದ ರುಕ್ಮಯ ಗೌಡ ಮನೆ ಮತ್ತು ಚೆಲುವಮ್ಮ ಮನೆಯಲ್ಲಿ ಮಾಹಿತಿ ಸಂಗ್ರಹಿಸಿ ಬೆಂದ್ರಾಳ ಸುತ್ತಮುತ್ತಲಿನ ಸುಮಾರು ಐದು ಕಿಮೀ ಅರಣ್ಯ ಪ್ರದೇಶದೊಳಗೆ ಹುಡುಕಾಟ ನಡೆಸಿ ನಂತರ ಸ್ಯಾಟ್ ಲೈಟ್ ಕರೆ ಹೋದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದರು.
ಸ್ಯಾಟ್ ಲೈಟ್ ಕರೆ ಹೋದ ಪ್ರದೇಶಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಮ್ಮದ್ ಅಸ್ಲಾಮ್ , ಪ್ರಶಾಂತ್ , ರಾಜೇಶ್ ಹಾಗೂ ಸ್ಥಳೀಯರಾದ ಮೋಹನ್ ಗೌಡ, ಉಮೇಶ್.ಬಿ , ಸತೀಶ್ ಬಳ್ಳಿ , ಕಾರ್ತಿಕ್ ಪೊಲೀಸರಿಗೆ ಕಾಡಿನಲ್ಲಿ ದಾರಿತೋರಿಸಲು ಸಹಕರಿಸಿದರು.