ಸುರತ್ಕಲ್: ಸುರತ್ಕಲ್ ಜಂಕ್ಷನ್ ಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರನ್ನಿಡಲು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮತ್ತು ಆ ಭಾಗದ ಬಿಜೆಪಿ ಕಾರ್ಪೊರೇಟರುಗಳು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಎಸ್ ಡಿಪಿಐ ಖಂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ ಡಿಪಿಐ ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ಸಲಾಂ, ವಿವಾದಿತ ವ್ಯಕ್ತಿಯ ಹೆಸರನ್ನಿಡಲು ಭರತ್ ಶೆಟ್ಟಿಯವರು ಮುಂದಾಗಿದ್ದು, ವಿವಾದವನ್ನು ಅನಗತ್ಯವಾಗಿ ಸೃಷ್ಟಿಸುತ್ತಿದ್ದಾರೆ.ಈ ಪ್ರಸ್ತಾವಣೆ ಹಿಂಪಡೆಯದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ನಾಡಿನ ಅಭಿವೃದ್ಧಿಗೆ ಶಾಸಕರಾಗಿ ಆಯ್ಕೆ ಮಾಡಿದರೆ ಭರತ್ ಶೆಟ್ಟಿ ಊರಿನ ಹೆಸರು ಬದಲಾಯಿಸಿಕೊಂಡು ತಿರುಗಾಡುತ್ತಿದ್ದಾರೆ. ಇದು ಶಾಸಕ ಸ್ಥಾನಕ್ಕೆ ಮಾಡುವ ಅವಮಾನ ಎಂದು ಎಸ್ ಡಿಪಿಐ ಹೇಳಿದ್ದು, ಯುಪಿಯ ಕರಾಳ ಹೆಸರು ಬದಲಾವಣೆಯ ಟ್ರೆಂಡ್ ನ್ನು ವಿದ್ಯಾವಂತರಿರುವ ಮಂಗಳೂರಿನಲ್ಲಿ ಜಾರಿಗೆ ಸಮ್ಮತಿಸಲ್ಲ. ಸಾವರ್ಕರ್ 25ಕ್ಕೂ ಅಧಿಕ ಭಾರಿ ಕ್ಷಮಾಪನೆ ಬ್ರಿಟಿಷರಿಗೆ ಸಲ್ಲಿಸಿದವರು. ಅವರ ಹೆಸರನ್ನಿಟ್ಟು ಅವಮಾನಿಸಲು ಬಿಡುವುದಿಲ್ಲ ಎಂದು ಎಸ್ ಡಿಪಿಐ ಹೇಳಿದೆ.