ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ ಸೀಸನ್ನ ಮಹಾಸಂಗ್ರಾಮ ಅದ್ಧೂರಿಯಾಗಿ ತೆರೆಕಂಡಿದ್ದು, ವಿಟ್ಲದ ಪುಣಚದ ಬಾಲಪ್ರತಿಭೆ ಅಶ್ಮಿತ್ ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರೋಚಕವಾಗಿ ನಡೆದ ಅಂತಿಮ ಫಿನಾಲೆ ಕದನದಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಜಡ್ಜಸ್ ಹಾಗೂ ವೀಕ್ಷಕರ ಮನಗೆದ್ದ ಅಶ್ಮಿತ್ ಆಕರ್ಷಕ ವಿನ್ನಿಂಗ್ ಟ್ರೋಫಿ ಜೊತೆಗೆ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಠಿಣ ಪೈಪೋಟಿ ನೀಡಿದ ಮಂಗಳೂರಿನ ಮತ್ತೊಬ್ಬ ಗಾಯಕ ಅಂಚಿತ್ಯ ರೈ ಪ್ರಥಮ ರನ್ನರ್ ಅಪ್ ಸ್ಥಾನ ಪಡೆದು, 15 ಲಕ್ಷ ರೂಪಾಯಿ ಬಹುಮಾನ ಹಾಗೂ ಟ್ರೋಫಿ ಪಡೆದಿದ್ದಾರೆ. ಈ ಮೂಲಕ ಈ ಬಾರಿಯ ಸರಿಗಮಪ ಅಂತಿಮ ಸುತ್ತಿನಲ್ಲಿ ಮಂಗಳೂರಿಗೆ ‘ಡಬಲ್ ಧಮಾಕಾ’ ಸಿಕ್ಕಂತಾಗಿದೆ.
ಎರಡು ಹಂತಗಳಲ್ಲಿ ನಡೆದ ಅಂತಿಮ ಹಣಾಹಣಿಗೆ ಒಟ್ಟು 6 ಬಾಲಪ್ರತಿಭೆಗಳು ಆಯ್ಕೆಯಾಗಿದ್ದರು. ಪ್ರತಿಯೊಬ್ಬರೂ ವಿಭಿನ್ನ ಶೈಲಿಯ ಗಾಯನದ ಮೂಲಕ ತೀವ್ರ ಪೈಪೋಟಿ ನೀಡಿದ್ದು, ವಿಜೇತರ ಆಯ್ಕೆ ತೀರ್ಪುಗಾರರಿಗೆ ಸವಾಲಾಗಿತ್ತು.


