ಸುಬ್ರಹ್ಮಣ್ಯ: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 25 ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ.
ಸಾಮೂಹಿಕ ವಿವಾಹವಾಗಲು ಬಯಸುವವರು ಶ್ರೀ ದೇವಳದ ಕಚೇರಿಯಿಂದ ಅರ್ಜಿ ಫಾರ್ಮ್ ಪಡೆದು ಭರ್ತಿ ಮಾಡಿ ದೇವಳಕ್ಕೆ ಸಲ್ಲಿಸಬಹುದು. 08257 – 281224, 236200, 281700, 281423 ನಂಬರ್ಗೆ ಕರೆ ಮಾಡಿ ಅಥವಾ ದೇವಳದ ಕಚೇರಿ ವೇಳೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಕನ್ಯಾ ಲಗ್ನ ಸುಮುಹೂರ್ತ: ಆಗಸ್ಟ್ 25 ರಂದು ಬೆಳಗ್ಗೆ 9 ರಿಂದ 9.50ರ ವರೆಗೆ ನೆರವೇರುವ ಕನ್ಯಾ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ವಧು – ವರರು ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 4 ಕೊನೆಯ ದಿನಾಂಕವಾಗಿದೆ. ಆಗಸ್ಟ್ 8 ರಂದು ನೋಂದಾಯಿತ ವಧು – ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುವುದು. ಆಗಸ್ಟ್ 13 ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾದರೆ, ಆಗಸ್ಟ್ 15 ರಂದು ವಧು – ವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ಅಗತ್ಯ ದಾಖಲೆಗಳು: ವಧು – ವರರು ಪೂರ್ಣ ವಿಳಾಸದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢ ಪತ್ರ ಪ್ರತಿ, ಪಾಸ್ ಪೋರ್ಟ್ ಸೈಜ್ನ 2 ಫೊಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು – ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯಿತಿ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖಾಧಿಕಾರಿಗಳಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಸಹಾಯ ಹಸ್ತ: ಸರಳ ಸಾಮೂಹಿಕ ವಿವಾಹವಾಗುವ ವರನಿಗೆ ಶ್ರೀ ದೇವಳದಿಂದ ಪ್ರೋತ್ಸಾಹ ಧನವಾಗಿ 5 ಸಾವಿರ ರೂ. ಹಾಗೂ ವಧುವಿಗೆ 10 ಸಾವಿರ ರೂ. ನೀಡಲಾಗುವುದು. ಸುಮಾರು 40 ಸಾವಿರ ರೂ. ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ನೀಡಲಾಗುವುದು. ವಿವಾಹಕ್ಕೆ ಆಗಮಿಸುವ ವಧು – ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಅವಶ್ಯಕ ವ್ಯವಸ್ಥೆಗಳನ್ನು ದೇವಳದಿಂದ ಮಾಡಲಾಗುವುದು.
ಸರಳ ಸಾಮೂಹಿಕ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ 10 ಸಾವಿರ ರೂ. ನಿಶ್ಚಿತ ಠೇವಣಿ ಸೌಲಭ್ಯ ಒದಗಿಸಲಾಗುವುದು. ವಿವಾಹವಾಗುವ ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ. ಒದಗಿಸಲಾಗುವುದು.