ಮಂಗಳೂರು: 24 ವರ್ಷಗಳಿಂದ ಮಾಜಿ ಸಚಿವ ಯು.ಟಿ. ಖಾದರ್ ಅವರ ಜೊತೆ ಗುರುತಿಸಿಕೊಂಡಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾಂಗ್ರೆಸ್ ಗೆ ಟಾಟಾ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ನ ನೂರಕ್ಕೂ ಅಧಿಕ ಕಾರ್ಯಕರ್ತರ ಜೊತೆ ಬಿಜೆಪಿ ಸೇರುತ್ತೇವೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದರು. ಕಾಂಗ್ರೆಸ್ ತೊರೆಯುವುದಕ್ಕೆ ಯು. ಟಿ. ಖಾದರ್ ಭ್ರಷ್ಟಾಚಾರವೇ ಕಾರಣ ಎಂದು ದೂರಿದ್ದಾರೆ.
ಯು. ಟಿ. ಖಾದರ್ ಅತ್ಯಂತ ಭ್ರಷ್ಟ ರಾಜಕಾರಣಿ. ಅವರ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ. ಅತೀ ಶೀಘ್ರದಲ್ಲಿ ಎಲ್ಲರೂ ಬಿಜೆಪಿ ಸೇರುತ್ತೇವೆ. ಉಳ್ಳಾಲ ಕ್ಷೇತ್ರ ಅಭಿವೃದ್ಧಿಯೇ ಆಗಿಲ್ಲ. ಖಾದರ್ ಅಲ್ಪ ಸ್ವಲ್ಪ ಅನುದಾನದ ಕಾಮಗಾರಿ ಮಾಡಿ ಫೋಸ್ ನೀಡುತ್ತಾರೆ. ಯು. ಟಿ. ಖಾದರ್ಗೆ ದೇಶಾದ್ಯಂತ ಮನೆ ಇದೆ. ಆದರೆ ಉಳ್ಳಾಲದ ಬಡವರಿಗೆ ಮನೆ ಇಲ್ಲ” ಎಂದು ಸಂತೋಷ್ ಶೆಟ್ಟಿ ಆಕ್ರೋಶ ವ್ಯಕ್ಯಪಡಿಸಿದ್ದಾರೆ.
“ಯು. ಟಿ. ಖಾದರ್ ಕಾರ್ಯವೈಖರಿಗೆ ಬೇಸತ್ತಿದ್ದೇವೆ. ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಖಾದರ್ ನಾಲ್ಕು ಬಾರಿ ಉಳ್ಳಾಲದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೇವಲ ಶಾಸಕರಾಗಿರೋದು ಮಾತ್ರವಲ್ಲದೇ ವಸತಿ ಸಚಿವರಾಗಿ, ಆರೋಗ್ಯ ಸಚಿವರಾಗಿ, ನಗರಾಭಿವೃದ್ಧಿ ಸಚಿವರಾಗಿ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿಯೂ ಅಧಿಕಾರದಲ್ಲಿದ್ದರು” ಎಂದರು. “ಸಚಿವರಾಗಿದ್ದ ಆರು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಮಾಡುವ ಅವಕಾಶ ಇತ್ತು. ಆದರೆ ಖಾದರ್ ಜನರ ಮನಸ್ಸಿನಲ್ಲಿ ಉಳಿಯುವಂತಹ ಯಾವುದೇ ಕೆಲಸ ಮಾಡಿಲ್ಲ” ಎಂದು ಸಂತೋಷ್ ಶೆಟ್ಟಿ ಆರೋಪ ಮಾಡಿದ್ದಾರೆ.