ಮುಂಬೈ: ಮುಂಬೈನ ಸಾಕಿನಾಕ ಪ್ರದೇಶದಲ್ಲಿ ರೇಪ್ ಮತ್ತು ದೈಹಿಕ ಹಿಂಸೆಗೊಳಗಾಗಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದ ಮಹಿಳೆಯು ಇಂದು ಆಸ್ಪತ್ರೆಯಲ್ಲಿ ಸಾವಪ್ಪಿದ್ದಾರೆಂದು ತಿಳಿದು ಬಂದಿದೆ.
ಸುಮಾರು 33 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿ, ಈಗ ಉಸಿರು ಚೆಲ್ಲಿದ್ದಾರೆ. ಆರೋಪಿ ಈಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿ ಚಿತ್ರಹಿಂಸೆ ನೀಡಿದ್ದ. ಒಂದು ಸರ್ಜರಿ ಆಗಿದ್ದರೂ ಮಹಿಳೆ ಚೇರಿಸಿಕೊಂಡಿರಲಿಲ್ಲ. ಎಚ್ಚರವೂ ಆಗಿರಲಿಲ್ಲ. ಇದೀಗ ಆಕೆ ಮೃತಪಟ್ಟಿದ್ದಾಗಿ ವರದಿಯಾಗಿದೆ. ಇದು ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ನೆನಪಿಸುವಂತಿದೆ. ಅಂದು ಚಲಿಸುತ್ತಿದ್ದ ಬಸ್ ಮೇಲೆ ನಿರ್ಭಯಾಳನ್ನು ರೇಪ್ ಮಾಡಲಾಗಿತ್ತು.
ಸಕಿನಾಕಾ ಏರಿಯಾದಲ್ಲಿ ನಿಂತಿದ್ದ ಟೆಂಪೋದ ಮೇಲೆ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿತ್ತು. ರಕ್ತದ ಮಡುವಿನಲ್ಲಿ ನರಳುತ್ತ ಬಿದ್ದಿದ್ದ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಹಾಗೇ, ಕೆಲವೇ ಹೊತ್ತಲ್ಲಿ ಆರೋಪಿಯನ್ನೂ ಬಂಧಿಸಿದ್ದರು. ಪ್ರಸ್ತುತ ಪ್ರಕರಣದ ಸಂಬಂಧ ತನಿಖೆಯೂ ನಡೆಯುತ್ತಿದೆ. ಶುಕ್ರವಾರ ಮುಂಜಾನೆ ಹೊತ್ತಿಗೆ ಪೊಲೀಸರಿಗೆ ಯಾರೋ ಕರೆ ಮಾಡಿ, ಇಲ್ಲೊಬ್ಬ ವ್ಯಕ್ತಿ ಮಹಿಳೆಯೊಬ್ಬರನ್ನು ಥಳಿಸುತ್ತಿದ್ದಾನೆ ಎಂದು ಹೇಳಿದ್ದರು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿಯೇ ಮಹಿಳೆಗೆ ತೀವ್ರ ರಕ್ತಸ್ರಾವ ಆಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ಈ ಹೀನಾಯ ಕೃತ್ಯವನ್ನು ಎಸಗಿದ ರಾಜಸ್ತಾನ ಮೂಲದ ಮೋಹನ್ ಚೌಹಾನ್(45) ಎಂಬುವವನನ್ನು ಸಿಸಿಟಿವಿ ಫೂಟೇಜ್ಗಳ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನದ ಆರೋಪಗಳು ದಾಖಲಾಗಿದ್ದವು. ಇದೀಗ, ಈ ಕೇಸು ಅತ್ಯಾಚಾರ ಮತ್ತು ಕೊಲೆಯ ಪ್ರಕರಣವಾಗಿ ಬದಲಾಗಿದೆ.