ಹೈದೆರಾಬಾದ್: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ತೆಲುಗಿನ ಖ್ಯಾತ ನಟ ಸಾಯಿ ಧರ್ಮ ತೇಜ್ ಸ್ಥಿತಿ ಗಂಭೀರವಾಗಿದೆ. ಹೈದರಾಬಾದ್ನ ಕೇಬಲ್ ಸೇತುವೆಯ ಮೇಲೆ ಸಾಯಿ ಧರ್ಮ ತೇಜ್ ಅವರು ಶುಕ್ರವಾರ ರಾತ್ರಿ ಬೈಕ್ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಮೆಗಾಸ್ಟಾರ್ ಚೀರಂಜೀವಿ ಕುಟುಂಬದವರಾಗಿರುವ ಸಾಯಿ ಧರಮ್ ತೇಜ್ ಚಲಾಯಿಸುತ್ತಿದ್ದ ಸ್ಪೋರ್ಟ್ಸ್ ಬೈಕ್ ಸ್ಕಿಡ್ ಆದ ಪರಿಣಾಮ ಅಪಘಾತವಾಗಿದ್ದು, ಅಪಘಾತದ ಬಳಿಕ ಪ್ರಜ್ಞಾಹೀನರಾದ ಸಾಯಿ ಧರಮ್ ತೇಜ್ ರನ್ನು ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
‘ವೇಗವಾಗಿ ಚಲಿಸುತ್ತಿದ್ದ ಬೈಕ್ ಸ್ಕಿಡ್ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಸಾಯಿ ಧರ್ಮ ತೇಜ್ ಅವರು ಹೆಲ್ಮೆಟ್ ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಆಸ್ಪತ್ರೆಗೆ ನಟ ಪವನ್ ಕಲ್ಯಾಣ್, ಅಲ್ಲು ಅರ್ಜುನ್, ವರುಣ್ ತೇಜ್ ಸೇರಿದಂತೆ ಹಲವು ನಟರು ಭೇಟಿ ನೀಡಿ ಸಾಯಿಧರ್ಮ ತೇಜ್ ಆರೋಗ್ಯ ವಿಚಾರಿಸಿದ್ದಾರೆ.