Friday, June 27, 2025
HomeಕರಾವಳಿRSS ಹಿರಿಯ ಕಾರ್ಯಕರ್ತ ವೆಂಕಟ್ರಮಣ ಹೊಳ್ಳ ಸಾವಿಗೆ ಕಾರಣವಾಗಿದ್ದ ಟಿಪ್ಪರ್ ಚಾಲಕನ ಬಂಧನ

RSS ಹಿರಿಯ ಕಾರ್ಯಕರ್ತ ವೆಂಕಟ್ರಮಣ ಹೊಳ್ಳ ಸಾವಿಗೆ ಕಾರಣವಾಗಿದ್ದ ಟಿಪ್ಪರ್ ಚಾಲಕನ ಬಂಧನ

spot_img
- Advertisement -
- Advertisement -

ಪುತ್ತೂರು: RSS ನ ಹಿರಿಯ ಸ್ವಯಂಸೇವಕ, ಬಂಟ್ವಾಳ ನಿವಾಸಿ ವೆಂಕಟ್ರಮಣ ಹೊಳ್ಳ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಬೈಕ್‌ಗೆ ಢಿಕ್ಕಿ ಹೊಡೆದು ನಾಪತ್ತೆಯಾಗಿದ್ದ ಟಿಪ್ಪರ್ ಲಾರಿ ಮತ್ತು ಅದರ ಚಾಲಕನನ್ನು ಪುತ್ತೂರು ಸಂಚಾರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಬಕ ಸಮೀಪದ ಪೋಳ್ಯದಲ್ಲಿ ಇದೇ ತಿಂಗಳು 15ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮವಿಕಾಸ ಮಂಗಳೂರು ವಿಭಾಗ ಪ್ರಮುಖ್ ವೆಂಕಟ್ರಮಣ ಹೊಳ್ಳ ಅವರು ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ವೆಂಕಟ್ರಮಣ ಹೊಳ್ಳ ಅವರು ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಗುದ್ದಿ ರಸ್ತೆಗೆ ಎಸೆಯಲ್ಪಟ್ಟಿರಬಹುದು ಎಂದು ಕಂಡು ಬಂದಿತ್ತು. ಘಟನೆಯಲ್ಲಿ ವೆಂಕಟ್ರಮಣ ಹೊಳ್ಳ ಅವರ ತಲೆ ಜಜ್ಜಿ ಹೋಗಿದ್ದರಿಂದ ಯಾವುದೋ ಅಪರಿಚಿತ ವಾಹನದ ಚಕ್ರ ಇವರ ತಲೆಯ ಮೇಲೆ ಹೋಗಿರುವ ಕುರಿತು ಬಲವಾದ ಸಂಶಯದ ಮೇಲೆ ಪುತ್ತೂರು ಸಂಚಾರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಢಿಕ್ಕಿ ಹೊಡೆದ ಟಿಪ್ಪರ್ ಅನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಅರಿಯಡ್ಕದ ದಿನೇಶ್ ಕುಮಾರ್ ಮಾಲಕತ್ವದ ಮರಳು ಲೋಡ್‌ಗಾಗಿ ಮಂಗಳೂರು ಕಡೆ ತೆರಳುತ್ತಿದ್ದ ಟಿಪ್ಪರ್ (ಕೆ.ಎ 21 ಬಿ 3501) ನ ಚಾಲಕ ಪಾಣಾಜೆ ನಿವಾಸಿ ಚರಣ್ ಕುಮಾರ್ ಬಂಧಿತ ಆರೋಪಿ.

ವೆಂಕಟ್ರಮಣ ಹೊಳ್ಳ ಅವರು ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿ ಡಿ.15 ರ ನಸುಕಿನ ಜಾವ 5 ಗಂಟೆಯ ಸುಮಾರಿಗೆ ಬಂಟ್ವಾಳದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪೋಳ್ಯ ಸಮೀಪದ ತಿರುವಿನಲ್ಲಿ ವಾಹನ ವೇಗ ನಿಯಂತ್ರಿಸಲು ಅಳವಡಿಸಿದ್ದ ಬ್ಯಾರಿಕೇಡ್ ಬಳಿ ಹಿಂದಿನಿಂದ ಬಂದ ಟಿಪ್ಪರ್ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು.

ಘಟನೆ ನಸುಕಿನ ಜಾವ ಸಂಭವಿಸಿದ್ದರಿಂದ ಸರಿಯಾದ ಬೆಳಕು ಇಲ್ಲದ ಹಿನ್ನೆಲೆಯಲ್ಲಿ ಅಪಘಾತ ಎಸಗಿದ ವಾಹನವನ್ನು ಪತ್ತೆ ಮಾಡಲು ಪೊಲೀಸರಿಗೆ ತಲೆ ನೋವಾಗಿತ್ತು. ಸ್ಥಳೀಯ ಸಿ.ಸಿ ಕ್ಯಾಮರಾದಲ್ಲೂ ಟಿಪ್ಪರ್‌ಗಳು ಹೋಗುವುದು ಕಂಡರೂ ಟಿಪ್ಪರ್ ನಂಬರ್ ಸರಿಯಾಗಿ ಗೋಚರಿಸುತ್ತಿರಲಿಲ್ಲ. ಆದರೆ ಮುಂದಿನ ರಸ್ತೆಯಲ್ಲಿ ಸಿಕ್ಕಿದ ಸಿಸಿ ಕ್ಯಾಮರಾದಲ್ಲಿ ಟಿಪ್ಪರ್‌ಗಳು ಒಂದರ ಹಿಂದೆ ಇನ್ನೊಂದರಂತೆ ವೇಗವಾಗಿ ಹೋಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ನಡುವೆ ಟಿಪ್ಪರ್ ಜಿಪಿಎಸ್ ಮತ್ತು ಚಾಲಕನ ಮೊಬೈಲ್ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದು ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಸಹಿತ ಹಲವರಿಗೆ ಆರೆಸ್ಸೆಸ್ ಮಾರ್ಗದರ್ಶಕರಾಗಿದ್ದ ವೆಂಕಟ್ರಮಣ ಹೊಳ್ಳ ಅವರು ಬ್ರಹ್ಮಚಾರಿಯಾಗಿ ಸಂಘದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಜಾತಿ ತಾರತಮ್ಯ ಹೋಗಲಾಡಿಸಲು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಇವರ ಜೀವನಚರಿತ್ರೆಯನ್ನು ಉತ್ತರ ಭಾರತದ ಶಾಖೆಗಳಲ್ಲಿ ಸ್ವತಃ ಸರಸಂಘಚಾಲಕ ಡಾ.ಮೋಹನ್ ಭಗವತ್ ಅವರೇ ಸ್ವಯಂಸೇವಕರಿಗೆ ತಿಳಿಸುವಷ್ಟು ಮಾದರಿ ವ್ಯಕ್ತಿಯಾಗಿ ವೆಂಕಟರಮಣ ಹೊಳ್ಳ ಸಂಘದೊಳಗೆ ಗುರುತಿಸಿಕೊಂಡಿದ್ದರು ಎಂದು ಹಿರಿಯ ಸ್ವಯಂಸೇವಕರೊಬ್ಬರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!