ಕಾಸರಗೋಡು: ನಗರದ ತಾಲೂಕು ಕಛೇರಿ ಮುಂಭಾಗದಲ್ಲಿರುವ ಟಿ.ಎಚ್.ದಿನೇಶ್ ಅವರ ಮಾಲಕತ್ವದ ಚಂದ್ರಗಿರಿ ಜುವೆಲ್ಲರಿ ಶಾಪ್ ನಿಂದ ಒಂದೂವರೆ ಪವನ್ ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ.
ಇಡುಕ್ಕಿ ತೊಡುಪುಯದ 40 ವಯಸ್ಸಿನ ಜೋಬಿ ಜೋರ್ಜ್ ಬಂಧಿತ ಆರೋಪಿ. ಚಿನ್ನಾಭರಣದ ಖರೀದಿ ಸೋಗಿನಲ್ಲಿ ಬಂದ ಜೋಬಿ ಚಿನ್ನದ ಸರ ಸಹಿತ ಸ್ಥಳದಿಂದ ಪರಾರಿಯಾಗಿದ್ದು, ಮಾಲಕ ಪರಿಶೀಲಿಸಿದಾಗ ಒಂದೂವರೆ ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡು ಬಂದಿತ್ತು.
ಸಿಸಿಟಿವಿ ಗಮನಿಸಿದಾಗ ಚಿನ್ನದ ಸರ ನಾಪತ್ತೆಯಾಗಿರುವುದು ಕಂಡುಬಂದಿದ್ದು, ಕೂಡಲೇ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಜುವೆಲ್ಲರಿ ಶಾಪ್ ಗೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿ ತನಿಖೆ ಆರಂಭಿಸಿದ್ದು, ಈ ವೇಳೆಯಲ್ಲಿ ಇತರ ಚಿನ್ನಾಭರಣ ಮಳಿಗೆಗೂ ಮಾಹಿತಿ ನೀಡಲಾಯಿತು.
ಆರೋಪಿಯು ಚಿನ್ನದ ಸರವನ್ನು ಕಾಞಂಗಾಡ್ ನ ಜುವೆಲ್ಲರಿಯೊಂದರಲ್ಲಿ 54, 500 ರೂ. ಗಳಿಗೆ ಮಾರಾಟ ಮಾಡಿರುವುದನ್ನು ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


