ಮಂಗಳೂರು: ಇಲ್ಲಿನ ಉಳ್ಳಾಲ ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿ ಹಣ ಹಾಗೂ ಚಿನ್ನಾಭರಣಗಳನ್ನು ದೋಚುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಕೊನೆಗೂ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆರೋಪಿಯಿಂದ ಕಳವುಗೈದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮನೆಗಳಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ಕಳ್ಳತನ ಮಾಡುತ್ತಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು ಅದರಂತೆ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್(35) ಬಂಧಿತ ಆರೋಪಿ.
ಆರೋಪಿ ಸೋಮೇಶ್ವರ ಬಸ್ಸು ನಿಲ್ದಾಣದ ಮನೆ ಮತ್ತು ಮತ್ತು ಮೇಲಂಗಡಿಯ ಮನೆಗೆ ಮತ್ತು ದೈವಸ್ಥಾನದಿಂದ ಕಳವು ಮಾಡಿದ್ದು, ಸ್ಥಳೀಯ ಮನೆಯೊಂದರ ಸಿಸಿಟಿವಿಯಲ್ಲಿ ಮತ್ತು ಸೋಮೇಶ್ವರದ ಹೋಂ ಸ್ಟೇಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಕಳ್ಳತನವಾದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೊವಾಝ್ ಮಾಸ್ತಿಕಟ್ಟೆ ನಿವಾಸಿಯಾದರೂ ಆತ ಹೆಚ್ಚಾಗಿ ಕಣ್ಣೂರಿನಲ್ಲಿರುವ ಪತ್ನಿ ಮನೆಯಲ್ಲಿ ವಾಸವಾಗಿದ್ದ. ಮಾಸ್ತಿಕಟ್ಟೆಯ ಮನೆಗೆ ಆಗಾಗ್ಗೆ ಬರುತ್ತಿದ್ದ ಈತ ಬುಧವಾರ ಸಂಜೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿಯಿರುವ ಪ್ರಶಾಂತ್ ಅವರ ಮನೆಯ ಹಿಂಬಾಗಿಲು ಮುರಿದು ಕರಿಮಣಿ ಸರ, ಚೈನ್ ಸೇರಿ ಒಟ್ಟು 26 ಗ್ರಾಂ ಚಿನ್ನ ಮತ್ತು ಮೂರು ಸಾವಿರ ನಗದನ್ನು ಕದ್ದಿದ್ದ. ಪ್ರಶಾಂತ್ ತನ್ನ ಕುಟುಂಬದೊಂದಿಗೆ ಉಡುಪಿಯಲ್ಲಿರುವ ಪತ್ನಿ ಮನೆಗೆ ತೆರಳಿದ್ದಾಗ ಈತ ಕಳ್ಳತನ ನಡೆಸಿದ್ದ. ಅದೇ ದಿನ ಮೇಂಗಡಿಯಲ್ಲಿ ಕಿರೋಡಿಯನ್ ಕುಟುಂಬಸ್ಥರ ದೈವಸ್ಥಾನಕ್ಕೆ ಕನ್ನ ಹಾಕಿದ್ದು, ದೈವದ ಹಿತ್ತಾಳೆಯ ಪರಿಕರಗಳನ್ನು ಕಳವು ನಡೆಸಿದ್ದು, ಅಲ್ಲೇ ಪಕ್ಕದ ದೈವಸ್ಥಾನವನ್ನು ನೋಡಿಕೊಳ್ಳುತಿದ್ದ ಪ್ರಸಾದ್ ಅವರ ಮನೆ ಹಿಂಬಾಗಿಲನ್ನು ಮುರಿದು ಕಪಾಟಿನಲ್ಲಿಟ್ಟಿದ್ದ 56 ಗ್ರಾಂ ಚಿನ್ನವನ್ನು ಕಳವು ನಡೆಸಿದ್ದ.
ಕಳವುಗೈದ ದೃಶ್ಯ ಸ್ಥಳೀಯ ಮನೆಯೊಂದರಲ್ಲಿ ದಾಖಲಾಗಿದ್ದು, ಸೋಮೇಶ್ವರ ಬಳಿಯ ಹೋಮಸ್ಟೇಯೊಂದರಲ್ಲಿನ ಸಿಸಿಟಿವಿಯಲ್ಲಿ ಈತ ಕಳವಿಗೆ ಯತ್ನಿಸಿರುವ ದೃಶ್ಯ ದಾಖಲಾಗಿದೆ. ಉಳ್ಳಾಲ ಪೊಲೀಸರು ಸಿಸಿಟಿವಿಯ ಆಧಾರಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.