ಪುತ್ತೂರು: ರಾತ್ರೋರಾತ್ರಿ ಸುರಿದ ರಣ ಮಳೆಗೆ ಮನೆಯೊಂದು ಕುಸಿದು ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಪುತ್ತೂರಿನ ಬಲ್ನಾಡು ಗ್ರಾಮದ ಸಾರ್ಯ ಸಮೀಪ ನಡೆದಿದೆ.
ಬಲ್ನಾಡು ಗ್ರಾಮದ ಸಾರ್ಯ ಅಬರೆಗುರಿ ನಿವಾಸಿ ವಿಶ್ವನಾಥ ರೈ ಎಂಬವರ ಹಂಚಿನ ಮನೆ ಮಳೆಗೆ ಕುಸಿದು ಬಿದ್ದಿದೆ. ಕೂಲಿ ಕಾರ್ಮಿಕರಾಗಿರುವ ವಿಶ್ವನಾಥ್ ರೈ ಪತ್ನಿ, ಹಾಗೂ ಇಬ್ಬರು ಪುತ್ರಿಯರೊಂದಿಗೆ ಮನೆಯಲ್ಲಿ ವಾಸವಿದ್ದರು. ರಾತ್ರಿ ಸುಮಾರು ಒಂದೂವರೆ ಗಂಟೆ ವೇಳೆಗೆ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿದ್ದ ಶಬ್ದ ಕೇಳಿ ಮನೆಯೊಳಗಿದ್ದವರು ಹೊರಗೆ ಓಡಿ ಬಂದಿದ್ದಾರೆ. ಅಷ್ಟರಲ್ಲಿ ವಿಶ್ವನಾಥ ರೈಯವರ ಇಬ್ಬರು ಪುತ್ರಿಯರಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಸಂಬಂಧಿಕರ ಮನೆಯಲ್ಲಿ ಅವರಿಗೆ ತಾತ್ಕಾಲಿಕವಾಗಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆಯಾದರೂ ಈ ಕುಟುಂಬಕ್ಕೆ ಶಾಶ್ವತವಾದ ಸೂರಿನ ವ್ಯವಸ್ಥೆ ಆಗಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪರಮೇಶ್ವರಿ ಭಟ್, ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿ ಶರೀಫ್, ಗ್ರಾಮಲೆಕ್ಕಾಧಿಕಾರಿ ವಾರಿಜಾ,ಗ್ರಾಮ ಸಹಾಯಕ ಸಂಜೀವ ಹಾಗೂ ಸ್ಥಳೀಯ ಮುಖಂಡರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾತ್ಕಾಲಿಕ ಪರಿಹಾರವಾಗಿ ಮನೆಯ ಮಾಡಿಗೆ ಶೀಟು ಅಳವಡಿಸಿಕೊಡುವ ಕುರಿತು ಚಿಂತನೆ ನಡೆಸಲಾಗಿದ್ದು ಸೆ.9ರಂದು ಮತ್ತೆ ಗ್ರಾ.ಪಂ.ನಿಂದ ಅಲ್ಲಿಗೆ ಭೇಟಿ ನೀಡಲಾಗುವುದು ಎಂದು ಗ್ರಾ.ಪಂ.ಸದಸ್ಯ ರವಿಚಂದ್ರ ತಿಳಿಸಿದ್ದಾರೆ. ವಿಶ್ವನಾಥ ರೈಯವರ ಮನೆಗೆ ಸರಿಯಾದ ರಸ್ತೆಯ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಸಾಮಾಗ್ರಿಗಳನ್ನು ಕೊಂಡೊಯ್ಯಲೂ ಹರಸಾಹಸ ಪಡಬೇಕಾಗಿದೆ ಎನ್ನಲಾಗಿದೆ.