ಮಂಗಳೂರು: ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಮಂಗಳೂರಿನ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆದಿದೆ. ಕೊಂಚಾಡಿ ನಿವಾಸಿ ಆತೀಶ್ (20) ಮೃತ ದುರ್ದೈವಿ.
ಆತೀಶ್ ಸಂಜೆ 6.45ರ ಸುಮಾರಿಗೆ ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಹೋಗುತ್ತಿದ್ದರು. ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ಗಿಂತ ಸ್ವಲ್ಪ ಮೊದಲು ಡಿವೈಡರ್ ಪಕ್ಕದಲ್ಲಿದ್ದ ಹೊಂಡವನ್ನು ಮಳೆಯಿಂದಾಗಿ ಗಮನಿಸದೆ ಕೊನೆಯ ಕ್ಷಣದಲ್ಲಿ ಹೊಂಡ ತಪ್ಪಿಸಲು ಯತ್ನಿಸಿದ್ದಾರೆ. ಆಗ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಢಿಕ್ಕಿ ಹೊಡೆದು ಸುಮಾರು 50 ಅಡಿ ದೂರಕ್ಕೆ ಹೋಗಿ ಬಿತ್ತು. ಆತೀಶ್ ಅವರ ತಲೆ ಡಿವೈಡರ್ ಮಧ್ಯೆ ಅಳವಡಿಸಿದ ರಿಫ್ಲೆಕ್ಟರ್ ಕಬ್ಬಿಣದ ಕಂಬಕ್ಕೆ ಬಡಿದಿತ್ತು.
ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದದರೂ, ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.