ನೆಲ್ಯಾಡಿ: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಜನಸಾಮಾನ್ಯರು ಹೈರಾಣಾಗುವುದು ಕೊನೆಯೇ ಇಲ್ಲ ಎಂಬಂತಾಗಿದೆ. ಇದಕ್ಕೆ ಪೂರಕ ಎಂಬಂತೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಹಲವು ವರ್ಷಗಳ ಹಿಂದೆ ಅಗೆದು ಹಾಕಿರುವ ಕಮರಿಗೆ ಸರಕು ಸಾಗಾಟದ ಕಂಟೇನರ್ ಲಾರಿಯೊಂದು ಮಗುಚಿ ಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ ಲಾರಿಯೊಂದು ರಸ್ತೆ ಬದಿಯ ಆಳದ ಕಮರಿಗೆ ಉರುಳಿ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. ಹಾಸನ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಯು ಪೆರಿಯಶಾಂತಿ ಬಳಿ ರಸ್ತೆ ಅಗಲೀಕರಣಕ್ಕೆಂದು ತೆಗೆಯಲಾಗಿದ್ದ ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಸಂಸದರ ನಿಲ್ಯಕ್ಷ
ಹಾಸನದಿಂದ ಬಿಸಿರೋಡ್ ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಹಲವು ವರ್ಷಗಳ ಹಿಂದೆಯೇ ಸರ್ವೇ ಆಗಿ ಭೂ ಸ್ವಾಧೀನ ಪ್ರಕ್ರಿಯೆ ಕೂಡ ನಡೆದಿದೆ. ಭೂ ಸ್ವಾಧೀನದ ನಂತರ ರಸ್ತೆಯ ಕಾಮಗಾರಿ ಪ್ರಾರಂಭವಾಗಿ ಬಿಸಿರೋಡಿನಿಂದ ಅಡ್ಡಹೊಳೆಯವರೆಗೆ ರಸ್ತೆಯ ಬದಿಯ ಉದ್ದಕ್ಕೂ ಬೃಹದಾಕಾರದ ಗುಂಡಿಗಳನ್ನು ತೆಗೆಯಲಾಗಿದೆ. ಈಗಾಗಲೇ ಹಲವು ವಾಹನಗಳು ಈ ಕಮರಿಗೆ ಬಿದ್ದು, ಸಾವು ನೋವು ಆಗಿದ್ದು ಇದೆ.
ಕೇಂದ್ರ ಸರ್ಕಾರದ ಅಧೀನಕ್ಕೆ ಬರುವ ಈ ರಸ್ತೆಯ ಬಗ್ಗೆ ಸಂಸದರಿಗೆ ಯಾವ ಲಕ್ಷ್ಯವೂ ಇಲ್ಲ. ಈ ಅವ್ಯವಸ್ಥೆಯ ಪರಮಾವಧಿಯ ಬಗ್ಗೆ ಸಂಸದರ ಬಳಿ ಅನೇಕ ಬಾರಿ ದೂರು ನೀಡಿದಾಗಲೂ ರಸ್ತೆ ನಿರ್ಮಾಣದ ಟೆಂಡರ್ ವಹಿಸಿಕೊಂಡಿರುವ ಸಂಸ್ಥೆಯ ಮೇಲೆ ಕೈ ತೋರಿಸಿ ತಾವು ಜವಾಬ್ದಾರಿಯಿಂದ ನುಣುಚಿಕೊಂಡ ಹಲವು ನಿದರ್ಶನಗಳು ಕಣ್ಣ ಮುಂದಿದೆ.