Wednesday, May 1, 2024
HomeUncategorizedಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಮತ್ತು ಮಾಣಿ ಗುತ್ತು ಭಂಡಾರ ಚಾವಡಿಯ ಪುನಃ ಪ್ರತಿಷ್ಠೆ, ಬ್ರಹ್ಮಕಲಶ...

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಮತ್ತು ಮಾಣಿ ಗುತ್ತು ಭಂಡಾರ ಚಾವಡಿಯ ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ಕಾಲಾವಧಿ ಮೆಚ್ಚಿ ಜಾತ್ರೆ ಮಹೋತ್ಸವ

spot_img
- Advertisement -
- Advertisement -

ಬಂಟ್ವಾಳ: ಬ್ರಹ್ಮಶ್ರೀ ಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವ ಮತ್ತು ಕೂಡುಕಟ್ಟಿನ ಯಜಮಾನತ್ವದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಬ್ರಹ್ಮಕಲಶ ಮತ್ತು ಮಾಣಿಗುತ್ತು ಭಂಡಾರದಮನೆ ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನೂತನ ಧರ್ಮಚಾವಡಿಯಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ಕಾಲಾವಧಿ ಮೆಚ್ಚಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು 2024 ಜನವರಿ 20 ಶನಿವಾರದಿಂದ 25 ಗುರುವಾರದವರೆಗೆ ನಡೆಯಲಿದ್ದು, ಕಾಲಾವಧಿ ಮೆಚ್ಚಿ ಜಾತ್ರೆಯ ಭಂಡಾರವು 2024 ಫೆಬ್ರವರಿ 05 ರಂದು ಏರಲಿದ್ದು ಜಾತ್ರಾ ಮಹೋತ್ಸವವು 06 ಮಂಗಳವಾರದ ತನಕ ನಡೆಯಲಿದೆ.

ಕಾರ್ಯಕ್ರಮದ ವಿವರಗಳು: 2024 ಜ. 20 ಶನಿವಾರದಂದು ರಾತ್ರಿ ಗಂಟೆ 7 ರಿಂದ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಬಿಂಬ ಮಂಚ ಪರಿಗ್ರಹ, ಪುಣ್ಯಾಹ, ಬಿಂಬ ಜಲಾಧಿವಾಸ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ ಮಾಣಿಗುತ್ತು ಧರ್ಮಚಾವಡಿಯಲ್ಲಿ ಅಂಕುರಾರ್ಪಣೆ ನಡೆಯಲಿದೆ.  ಜ. 21 ಭಾನುವಾರದಂದು ಬೆಳಿಗ್ಗೆ 7.00 ಗಂಟೆಯಿಂದ ಶ್ರೀ ಊಳ್ಳಾಲ್ತಿ ಮಾಡದಲ್ಲಿ ಶ್ರೀ ಗಣಪತಿ ಹೋಮ, ಬಿಂಬಶುದ್ಧಿ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮಗಳು, ಹೋಮ ಕಲಶಾಭಿಷೇಕ ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಗಣಪತಿ ಹೋಮ, ಅಂಕುರ ಪೂಜೆ ನಡೆಯಲಿದೆ. ಜ. 22 ಸೋಮವಾರದಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಶ್ರೀ ಗಣಪತಿ ಹೋಮ, ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಗಣಪತಿ ಹೋಮ, ಅಂಕುರ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಜ. 23 ಮಂಗಳವಾರದಂದು ಬೆಳಗ್ಗೆ ಗಂಟೆ 7 ರಿಂದ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಶ್ರೀ ಗಣಪತಿ ಹೋಮ, ತತ್ವಹೋಮ, ತತ್ವಕಲಶ ಪೂಜೆ, ತತ್ವಕಲಶಾಭಿಷೇಕ, ಪರಿಕಲಶಾಭಿಷೇಕ ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಗಣಪತಿ ಹೋಮ, ಅಂಕುರ ಪೂಜೆ ನಡೆಯಲಿದೆ. ಜ. 24 ಬುಧವಾರ ಹಾಗೂ ಜ. 25 ಗುರುವಾರದಂದು ಕೂಡಾ ಅನೇಕ ಹೋಮ ಹವನಗಳು ನಡೆಯಲಿದೆ.

ವಿಶೇಷ ಸೂಚನೆ: ತಾ. 29-12-2024ನೇ ಶುಕ್ರವಾರ ಮಾಣಿಗುತ್ತು ನಾಗಬನದಲ್ಲಿ ಶ್ರೀ ನಾಗದೇವರು ಮತ್ತು ಶ್ರೀ ರಣೇಶ್ವರೀ ದೈವದ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಜರುಗಲಿರುವುದು. ಬ್ರಹ್ಮಕಲಶೋತ್ಸವದ ಸಲುವಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ತಾ. 20-01-2024ನೇ ಶನಿವಾರ ಮಧ್ಯಾಹ್ನ ಗಂಟೆ 1.30ರಿಂದ ಅರೆಬೆಟ್ಟು- ಕಲ್ಲಡ್ಕ-ಸೂರಿಕುಮೇರು-ಮಾಣಿ-ಕೊಡಾಚೆ ಮಾರ್ಗವಾಗಿ ದೈವಸ್ಥಾನಕ್ಕೆ ಬರುವುದು. ಹಸಿರುವಾಣಿ ಹೊರೆಕಾಣಿಕೆಯಾಗಿ ಬೆಳ್ಳಿಗೆ ಅಕ್ಕಿ, ತೆಂಗಿನಕಾಯಿ, ಸೀಯಾಳ, ಅಡಿಕೆ, ಬಾಳೆಎಲೆ, ಬಾಳೆಗೊನೆ, ಬೆಲ್ಲ, ಸಕ್ಕರೆ, ಹಿಂಗಾರ, ತರಕಾರಿ, ಎಣ್ಣೆ, ತುಪ್ಪ ಮತ್ತು ಇತರ ಸುವಸ್ತುಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು. ತಾ. 20-01-2024ರಿಂದ ತಾ. 25-01-2024ರ ವರೆಗೆ ಗ್ರಾಮದ ಎಲ್ಲ ಭಕ್ತಾದಿಗಳು ತಮ್ಮ ಮನೆ, ಅಂಗಳ, ಅಂಗಡಿ, ವಾಹನಗಳನ್ನು ಶುಚಿಗೊಳಿಸಿ, ಬೀದಿಗಳನ್ನು ತಳಿರು ತೋರಣಗಳಿಂದ ಶೃಂಗರಿಸಬೇಕಾಗಿ ವಿನಂತಿ. ಭಕ್ತಾದಿಗಳ ತನು-ಮನ-ಧನ ಹಾಗೂ ಸರ್ವರೀತಿಯ ಸಹಕಾರವನ್ನು ಯಾಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

- Advertisement -
spot_img

Latest News

error: Content is protected !!