ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಈಗ ತೌಕ್ತೆ ಚಂಡಮಾರುತದ ಆರ್ಭಟ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಹಾನಿ ಸೃಷ್ಟಿಯಾಗಿದೆ. ಮನೆಗಳು, ಮರಗಳು ಧರೆಗುರುಳಿವೆ.
ಇತ್ತ ಅರಬ್ಬೀ ಸಮುದ್ರದಲ್ಲಿ ಚಂಡಮಾರತಕ್ಕೆ ಸಿಲುಕಿ, ಕಡಲ ಮಧ್ಯದಲ್ಲಿರುವ 9 ಮಂದಿ ಕಾರ್ಮಿಕರ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭಾರೀ ಅಲೆಗಳ ಕಾರಣದಿಂದ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ವಿಳಂಬವಾಗುತ್ತಿದ್ದು,ನೌಕಾ ಸೇನೆಯ ಹೆಲಿಕಾಪ್ಟರ್ ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಲು ರಾಜ್ಯ ಸರ್ಕಾರ ಚಿಂತನೆ ಮಾಡಿದೆ.
ಕಾರವಾರದ ಕದಂಬ ನೌಕಾ ನೆಲೆಯಿಂದ ಮಂಗಳೂರಿನ ಕಡಲ ತೀರಕ್ಕೆ ಹೆಲಿಕಾಪ್ಟರ್ ಗಳು ಹಾರಲಿದ್ದು, ಕಡಲ ಅಬ್ಬರದ ನಡುವೆಯೇ ಕಾರ್ಮಿಕರ ರಕ್ಷಣೆಗೆ ಸಿದ್ಧತೆ ಪೂರ್ಣಗೊಂಡಿದೆ.
ರಾಜ್ಯ ಸರ್ಕಾರದ ಮನವಿಯಂತೆ ಕಾರವಾರದಿಂದ ನೌಕಾ ಸೇನೆಯ ಹೆಲಿಕಾಪ್ಟರ್ಗಳು ಮಂಗಳೂರಿನ ಕಡಲ ತೀರಕ್ಕೆ ಬರಲಿದ್ದು, ಹವಾಮಾನ ತಿಳಿಯಾದ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭವಾಗಲಿದೆ. ಕಾಪು ಕಡಲ ಕಿನಾರೆಯಿಂದ 15 ನಾಟಿಕಲ್ ಮೈಲಿ ದೂರದಲ್ಲಿ ಕೋರಮಂಡಲ್ ಸ್ಟಗ್ನಲ್ಲಿ 9 ಕಾರ್ಮಿಕರು ಸಿಲುಕಿದ್ದು, ಬಂಡೆಗಳ ನಡುವೆ ನಿಂತಿದೆ.
ಈ ಸ್ಟಗ್ನಲ್ಲಿ 9 ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಕೋಸ್ಟ್ ಗಾರ್ಡ್ ನೌಕೆ IGS ವರಾಹ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ ಕಡಲ ಅಬ್ಬರ ತಡೆಯುಂಟು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಾರ್ಮಿಕರ ರಕ್ಷಣೆಗೆ ನೌಕಾ ಸೇನೆಯನ್ನು ಬಳಸಲು ತೀರ್ಮಾನಿಸಿದ್ದು, ಹೆಲಿಕಾಪ್ಟರ್ ಮೂಲಕ ಕಾರ್ಮಿಕರ ರಕ್ಷಣೆಗೆ ಯೋಜನೆ ಸಿದ್ಧಪಡಿಸಿದೆ
ಕೋರಮಂಡಲ್ ಸ್ಟಗ್ ಅಟ್ಲಾಂಟಿಕ್ ಶಿಫ್ಟಿಂಗ್ ಕಂಪೆನಿಗೆ ಸೇರಿದೆ. ಎಂ.ಆರ್.ಪಿ.ಎಲ್ ಈ ಸ್ಟಗ್ಗೆ ನೀಡಿದ ಗುತ್ತಿಗೆಯ ಅವಧಿ ಮುಗಿದಿದ್ದರೂ ಸಮುದ್ರದಲ್ಲೇ ಲಂಗರು ಹಾಕಿದ್ದವು. ಚಂಡಮಾರುತದ ಸೂಚನೆಯ ಬಳಿಕವೂ ಕಾರ್ಮಿಕರು ಸಮುದ್ರದಲ್ಲೇ ಇದ್ದ ಬಗ್ಗೆ ಎಂ.ಆರ್.ಪಿ.ಎಲ್ ಮತ್ತು ಎನ್ಎಂಪಿಟಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ವರದಿ ನೀಡಲು ಸೂಚನೆ ನೀಡಿದ್ದಾರೆ.
ಇನ್ನು ಅಲಯನ್ಸ್ ಎಂಬ ಇನ್ನೊಂದು ಸ್ಟಗ್ ಈಗಾಗಲೇ ಕಡಲಿನಲ್ಲಿ ಮುಳಗಿದ್ದು, ಸ್ಟಗ್ ಅವಶೇಷಗಳು ಪಡುಬಿದ್ರೆ ಕಡಲ ಕಿನಾರೆಯಲ್ಲಿ ಗೋಚರವಾಗಿವೆ. ಇದರಲ್ಲಿ ಎಂಟು ಕಾರ್ಮಿಕರಿದ್ದು, ಇಬ್ಬರ ಮೃತದೇಹ ಪತ್ತೆಯಾಗಿವೆ. ಮೂರು ಮಂದಿ ಈಜಿಕೊಂಡೇ ದಡ ಸೇರಿದ್ದು, ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯಾಚರಣೆಯನ್ನು ಕೋಸ್ಟ್ ಗಾರ್ಡ್ ಮತ್ತು ತಟರಕ್ಷಣಾ ಪಡೆ ಮಾಡುತ್ತಿದೆ.