ಬೆಳ್ತಂಗಡಿ : ಬುರುಡೆ ಷಡ್ಯಂತ್ರ ಪ್ರಕರಣ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರು ಮಂದಿ ಆರೋಪಿಗಳ ವಿರುದ್ಧ ಎಸ್.ಐ.ಟಿ ಅಧಿಕಾರಿಗಳು ನ.20 ರಂದು ‘ಸುಳ್ಳು ಸಾಕ್ಷಿ’ ವರದಿಯನ್ನು (Perjury Report) ಅಂಡರ್ ಸೆಕ್ಷನ್(u/s) ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ.
ಬೆಳ್ತಂಗಡಿ ಎಸ್.ಐ.ಟಿ ಅಧಿಕಾರಿಗಳು ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಜೈಲಿನಲ್ಲಿರುವ ಚಿನ್ನಯ್ಯ ಸೇರಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಸೌಜನ್ಯ ಮಾವ ವಿಠಲ್ ಗೌಡ, ಸುಜಾತ ಭಟ್ ಸೇರಿ ಒಟ್ಟು ಆರು ಮಂದಿ ಭಾಗಿಯಾದವರನ್ನು ಆರೋಪಿಗಳನ್ನಾಗಿ ಮಾಡಿ ‘ಸುಳ್ಳು ಸಾಕ್ಷಿ’ ವರದಿಯನ್ನು (Perjury Report) ಅಂಡರ್ ಸೆಕ್ಷನ್(u/s) 215 ಅಡಿಯಲ್ಲಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ.ಹೆಚ್.ಟಿ ಮುಂದೆ ನ.20 ರಂದು ಸಂಜೆ 3:15 ಕ್ಕೆ ಗಂಟೆಗೆ ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ತಂಡದವರು ಸಲ್ಲಿಕೆ ಮಾಡಿದ್ದಾರೆ.

ಎಸ್ಐಟಿ ವರದಿಯಲ್ಲಿ ಸುಮಾರು 3,923 ಪುಟಗಳನ್ನು ನಮೂದಿಸಿದ್ದಾರೆ. ಐದು ಮಂದಿ ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂಬುವುದಾಗಿ ವರದಿಯ ಆಧಾರದಲ್ಲಿ ಮುಂದಿನ ತನಿಖೆ ಬಗ್ಗೆ ನ್ಯಾಯಾಲಯ ಸೂಚನೆ ನೀಡುವಂತೆ ವರದಿಯಲ್ಲಿ ತಿಳಿಸಲಾಗಿದೆ.ಒಟ್ಟು ಪ್ರಕರಣದ ತನಿಖೆ ಮುಗಿಸಿದ ಬಳಿಕ ಮುಂದಿನ ದಿನಗಳಲ್ಲಿ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.


