ಬೆಳ್ತಂಗಡಿ: ಮಹಿಳೆಯೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಕೊಕ್ಕಡ ಸಮೀಪ ನಡೆದಿದೆ.
ಕೊಕ್ಕಡದ ಅಗರ್ತ ಎಂಬಲ್ಲಿಯ ಗಣೇಶ್ ಗೌಡ ಎಂಬವರ ಪತ್ನಿ ಮೋಹಿನಿ ಎಂಬವರು ಆಗಸ್ಟ್ 30 ರಂದು ಸಂಶಯಾಸ್ಪದ ರೀತಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಗೆ ಕಳೆದ ಎರಡು ವರ್ಷಗಳಿಂದ ಅನಾರೋಗ್ಯವಿತ್ತು. ಅಲ್ಲದೇ ದಂಪತಿ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ. ರಾತ್ರಿ ಮನೆಯಲ್ಲಿ ಒಮ್ಮೊಮ್ಮೆ ಸಣ್ಣಪುಟ್ಟ ಜಗಳಗಳು ನಡೆಯುತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದರಲ್ಲದೇ ಮಹಿಳೆ ಕಳೆದ ಕೆಲವು ದಿನಗಳ ಹಿಂದೆ ಬಿದ್ದು ಗಾಯ ಮಾಡಿಕೊಂಡಿದ್ದರು ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಒಂದು ವೇಳೆ ಕುಡಿತದಿಂದಾಗಿ ಬಿದ್ದು ತಲೆಗೆ ಗಾಯವಾಗಿದೆಯೇ ಅಥವಾ ಬೇರೆ ಏನಾದರೂ ನಡೆದಿದೆಯೇ ಎಂದು ತನಿಖೆಯಿಂದ ತಿಳಿದುಬರಬೇಕಾಗಿದೆ. ಮೇಲ್ನೊಟ್ಟಕ್ಕೆ ತಲೆಗೆ ಗಾಯವಾಗಿದ್ದು ಬಿದ್ದು ಗಾಯವಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತ ಶರೀರಕ್ಕೆ ಅಂತ್ಯ ಸಂಸ್ಕಾರ ಮಾಡಲು ತಿರಸ್ಕರಿಸಿದ ಕುಟುಂಬಸ್ಥರು
ಮೂಲತಃ ಸೋಮವಾರ ಪೇಟೆಯವರಾದ ಗಣೇಶ್ ಗೌಡ ಕಳೆದ ಹತ್ತು ವರುಷಗಳ ಹಿಂದೆ ಮನೆಯಿಂದ ಹೊರಬಂದ್ದು ಸುಳ್ಯ ಸಮೀಪದ ಮೋಹಿನಿ ಎಂಬವರನ್ನು ಮದುವೆಯಾಗಿ ಕೊಕ್ಕಡದ ಅಗರ್ತ ಎಂಬಲ್ಲಿ ವಾಸವಾಗಿದ್ದರು. ಒಮ್ಮೊಮ್ಮೆ ಊರಿಗೆ ತೆರಳುತ್ತಿದ್ದ ದಂಪತಿ ಅಲ್ಲಿ ಜಗಳವಾಡಿ ಬಂದಿದ್ದರು . ನಂತರ ಗಣೇಶ ಗೌಡ ದಂಪತಿ ಊರಿಗೆ ಹೋಗುತ್ತಿರಲಿಲ್ಲ. ಆದರೆ ಪೊಲೀಸರ ಮಾಹಿತಿಯಂತೆ ಮೃತರ ಮನೆಗೆ ಬಂದಿದ್ದ ಕುಟುಂಬಸ್ಥರಲ್ಲಿ ಅಂತ್ಯ ಸಂಸ್ಕಾರಕ್ಕೆ ನಿಲ್ಲಿ ಸಕಲ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ ಯೋಗೀಶ್ ಅಲಂಬಿಲ, ಹಾಗೂ ಪೊಲೀಸರು,ಸ್ಥಳೀಯರು ವಿನಂತಿಸಿದರೂ ಕೇಳದೇ ಹೊರಟು ಹೋದರೆನ್ನಲಾಗಿದೆ. ನಂತರ ಸ್ಥಳೀಯರ ಸಹಕಾರದಲ್ಲಿ ಕಾನೂನು ಪ್ರಕ್ರಿಯೆ ನಂತರ ಅಂತ್ಯ ಸಂಸ್ಕಾರಕ್ಕೆ ಗ್ರಾಮ ಪಂಚಾಯತ್ ಮೂಲಕ ವ್ಯವಸ್ಥೆ ಮಾಡಲಾಗುವುದು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ ತಿಳಿಸಿದರು.
ಅನಾಥನಾದ ಬಾಲಕ
ದಂಪತಿಗೆ 6 ವರ್ಷ ಪ್ರಾಯದ ಮಗನಿದ್ದು ಆತ ಈಗ ಅನಾಥನಾಗಿದ್ದಾನೆ. ವಿಚಾರಣೆಗಾಗಿ ಗಣೇಶ್ ಗೌಡ ಅವರನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕನನ್ನು ಸಂಬಂಧಿಕರು ಕರೆದುಕೊಂಡು ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಏನೂ ಅರಿಯದ ಮುಗ್ಧ ಬಾಲಕನನ್ನು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಸೇರಿಸುವ ಬಗ್ಗೆ ಪೊಲೀಸರು ನಿನ್ನೆ ಮಾಹಿತಿ ನೀಡಿದ್ದರು. ಅದರಂತೆ ಆರು ವರ್ಷದ ಮಗುವನ್ನು ನಿನ್ನೆ ರಾತ್ರಿಯೇ ಮಂಗಳೂರು ಬೊಂದೆಲ್ ನಲ್ಲಿರುವ ಚೈಲ್ಡ್ ವೆಲ್ ಫೇರ್ ಸೆಂಟರ್ ಗೆ ಧರ್ಮಸ್ಥಳ ಪೊಲೀಸರು ಹಸ್ತಾಂತರ ಮಾಡಿದ್ದಾರೆ.
ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ಇರಿಸಿ ಮನೆಗೆ ಬೀಗ ಹಾಕಿ ಪೊಲೀಸರು ವಾಹನದಲ್ಲಿ ಏನೂ ಅರಿಯದ ಮಗ ಹಾಗೂ ವಿಚಾರಣೆಗಾಗಿ ಮನೆ ಯಜಮಾನನನ್ನು ಕರೆದು ಕೊಂಡು ಹೋದಾಗ ಮನೆಯ ಮುಂದಿದ್ದ ಎರಡು ಸಾಕು ನಾಯಿಗಳು ಇನ್ನು ಮುಂದೆ ನಮಗೆ ಅನ್ನ ಹಾಕಿ ಪೋಷಿಸುವವರು ಯಾರು ಎಂಬ ನೋಟದಲ್ಲಿ ಸಾಗುತ್ತಿದ್ದ ಪೊಲೀಸ್ ಜೀಪನ್ನು ನೋಡುತ್ತಿರುವ ದೃಶ್ಯವಂತೂ ಕರುಳು ಹಿಂಡುವಂತಿತ್ತು.
ಪರಿಶೀಲನೆ ವೇಳೆ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ , ಸಬ್ ಇನ್ಸ್ ಪೆಕ್ಟರ್ ನಂದಕುಮಾರ್, ಮತ್ತು ಅರ್ಜುನ್ ,ಧರ್ಮಸ್ಥಳ ಪಿಎಸ್ಐ- ಅನಿಲ್ ಕುಮಾರ್.ಡಿ, ಮತ್ತು ಲೋಲಾಕ್ಷ , ಸಿಬ್ಬಂದಿಗಳಾದ ಪ್ರಮೋದಿನಿ,ಪ್ರಶಾಂತ್,ಸತೀಶ್,ಇಬ್ರಾಹಿಂ, ಪ್ರಮೋದ್ ಕುಮಾರ್ ,ಬೆನ್ನಿಚ್ಚನ್, ವಿಜಯ ರೈ,ಚಾಲಕ ಅಸೀಪ್ ಮತ್ತು ಮಂಗಳೂರು ಬೆರಳಚ್ಚು ತಜ್ಞರಾದ ಸಚಿನ್ ರೈ, ಪ್ರಶಾಂತ್, ಗಣೇಶ್, ಸುಂದರ್ ಶೆಟ್ಟಿ ಮತ್ತಿತರರು ಭಾಗಿಯಾಗಿದ್ದರು.