ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು 10ನೇ ತರಗತಿಯ ಸಮಾಜ ವಿಜ್ಞಾನದಿಂದ ತೆಗೆದು 10ನೇ ತರಗತಿಯ ಕನ್ನಡ (ಐಚ್ಚಿಕ) ವಿಷಯಕ್ಕೆ ಹಿಂಬಡ್ತಿ ನೀಡಿದ ಕ್ರಮವನ್ನು ಕೊನೆಗೂ ವಿಧಿಯಿಲ್ಲದೆ ಸರಕಾರ ಒಪ್ಪಿಕೊಂಡಿದೆ. ನಾರಾಯಣ ಗುರುಗಳ ಅನುಯಾಯಿಗಳು ಬೀದಿಗೆ ಬಂದು ಪ್ರತಿಭಟನೆ ನಡೆಸಿದ ತರುವಾಯ ಪ್ರತಿಭಟನೆಗೆ ಮಣಿದು ಪಠ್ಯ ಮರುಸೇರ್ಪಡೆಗೆ ಆದೇಶ ನೀಡಿದೆ.
ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಬಿಜೆಪಿಯ ಮುಖಂಡರುಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ರವರು ಜನತೆಯ ದಾರಿ ತಪ್ಪಿಸಲು ಪ್ರಯತ್ನಿಸಿ ವಿಫಲರಾದ್ರು. ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು ಬೆಳ್ತಂಗಡಿಯಿಂದ ಪ್ರಾರಂಭಿಸಿದ ಚಳುವಳಿಗೆ ಮಂಡಿಯೂರಿ ಈಗ ಮರು ಸೇರ್ಪಡಗೆ ಆದೇಶಿಸಿದ್ದಾರೆ ಎಂದು ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಪಠ್ಯ ಮರು ಸೇರ್ಪಡೆ ವಿಚಾರದಲ್ಲಿ ಹೋರಾಟ ನಡೆಸಿದ ಸಮಸ್ತ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳಿಗೆ ಕೆ. ವಸಂತ ಬಂಗೇರ ಕೃತಜ್ಞತೆ ಸಲ್ಲಿಸಿದ್ದಾರೆ.