ಬೆಂಗಳೂರು: ಸೈಬರ್ ವಂಚಕರು, ಇದೀಗ ಹೊಸ ಮಾದರಿಯಲ್ಲಿ ಸಾರ್ವಜನಿಕರ ಹಣ ದೋಚಲು ಯೋಜನೆಯನ್ನು ಮಾಡಿದ್ದು, ರಿಜಿಸ್ಟರ್ಡ್ ಪೋಸ್ಟ್ ಮೂಲಕ ಜನರನ್ನು ವಂಚಿಸಲು ಮುಂದಾಗಿದ್ದಾರೆ.
ಬೆಂಗಳೂರು ಸೇರಿ ದೇಶಾದ್ಯಂತ ಕೆಲ ವರ್ಷಗಳಿಂದ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಅದರಿಂದ ಅಮಾಯಕರುು ಕೋಟ್ಯಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಹೊಸ ಮಾದರಿಯ ಸೈಬರ್ ವಂಚನೆ ಸಾರ್ವಜನಿಕರು ಮಾತ್ರವಲ್ಲ, ಪೊಲೀಸರಿಗೂ ತಲೆನೋವಾಗಿದೆ.
ಸೈಬರ್ ವಂಚಕರು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಜನರನ್ನು ವಂಚಿಸಲು ಮುಂದಾಗಿದ್ದಾರೆ. ಭಾರತೀಯ ಅಂಚೆಯ ಕೆಂಪು ಬಣ್ಣದ ರಿಜಿಸ್ಟರ್ಡ್ ಲಕೋಟೆ ನಿಮ್ಮಮನೆಗೆ ಬರುತ್ತದೆ. ಈ ಲಕೋಟೆ ತೆರೆದರೆ ಒಳಗೆ ಭಾರತ ಸರ್ಕಾರದ ಲಾಂಛನ ಇರುವ ರಿಜಿಸ್ಟರ್ಡ್ ಕೂಪನ್ ಇರುತ್ತದೆ ಮತ್ತು ಅಪ್ಲಿಕೇಶನ್ ಫಾರ್ಮ್ ಕೂಡ ಇರುತ್ತದೆ. ಕೂಪನ್ ಮೇಲೆ ಸ್ಕ್ರ್ಯಾಚ್ ಮಾಡಿ ವಾಹನ ಅಥವಾ ವಿವಿಧ ಮಾದರಿಯ ಉಡುಗೊರೆ ಗೆಲ್ಲಿ ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುತ್ತದೆ. ನಂತರ ಅದನ್ನು ಸ್ಕ್ರ್ಯಾಚ್ ಮಾಡಿದರೆ, ನೀವು 12.80 ಲಕ್ಷ ರೂ. ಹಣ ಗೆದ್ದಿದ್ದೀರಿ ಮತ್ತು ಅದರ ಕೆಳಗೆ ಒಂದು ಎಸ್ಎಂಎಸ್ ಕೋಡ್ ಕೂಡ ಇರುತ್ತದೆ. ಆ ಕೋಡ್ ಬಳಸಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸೈಬರ್ ವಂಚಕರು ಕ್ಷಣಾರ್ಧದಲ್ಲಿ ದೋಚುತ್ತಾರೆ. ಅಷ್ಟೇ ಅಲ್ಲದೆ ವಂಚಕರು ಕಳುಹಿಸುವ ರಿಜಿಸ್ಟರ್ಡ್ ಲಕೋಟೆಯ ಒಂದು ಕಾಗದ ಪತ್ರದಲ್ಲಿ ಸ್ಕ್ಯಾನರ್ ಕೂಡ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಬೇಕು ಹಾಗೂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕೆಂದು ಕೆಳ ಭಾಗದಲ್ಲಿ ಬರೆದಿರುತ್ತದೆ. ಒಂದು ವೇಳೆ ಸ್ಕ್ಯಾನ್ ಮಾಡಿದರೆ ಅಥವಾ ಸಹಾಯವಾಣಿ ನಂಬರ್ಗೆ ಕರೆ ಮಾಡಿದರೂ ನಿಮ್ಮ ಖಾತೆಯಲ್ಲಿನ ಹಣ ವಂಚಕರ ಪಾಲಾಗುತ್ತದೆ. ಹೀಗೆ ಸೈಬರ್ ವಂಚಕರು ಹೊಸ ವಂಚನೆಯ ವಿಧಾನವನ್ನು ಕಂಡು ಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಕಚೇರಿ ಅಥವಾ ಮನೆಗೆ ಯಾವುದೇ ರಿಜಿಸ್ಟರ್ಡ್ ಪೋಸ್ಟ ಬಂದಾಗ ಪರಿಶೀಲಿಸಿ ನಂತರ ಅದರ ಸೂಚನೆಗಳನ್ನು ಪಾಲಿಸಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.