Saturday, June 13, 2026
Homeಆರಾಧನಾದೇರಾಜೆಬೆಟ್ಟ: ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕಕ್ಕೆ ಚಾಲನೆ, ವೈಭವದ ಹೊರೆಕಾಣಿಕೆ ಮೆರವಣಿಗೆ

ದೇರಾಜೆಬೆಟ್ಟ: ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕಕ್ಕೆ ಚಾಲನೆ, ವೈಭವದ ಹೊರೆಕಾಣಿಕೆ ಮೆರವಣಿಗೆ

- Advertisement -
- Advertisement -

ಬೆಳ್ತಂಗಡಿ: ಮರೋಡಿ ಗ್ರಾಮದ ದೇರಾಜೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ, 108 ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಮತ್ತು ನೇಮೋತ್ಸವದ ಪ್ರಥಮ ದಿನವಾದ ಶನಿವಾರ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಮರೋಡಿ ಶಾಂತಿನಗರ ಅರುಣೋದಯ ಮೈದಾನದಿಂದ ದೇರಾಜೆಬೆಟ್ಟಕ್ಕೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಕ್ಷೇತ್ರದ ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ.ಹೇಮರಾಜ್ ಬೆಳ್ಳಿಬೀಡು ಮೆರವಣಿಗೆಗೆ ಚಾಲನೆ ನೀಡಿದರು. ಹತ್ತಾರು ವಾಹನಗಳಲ್ಲಿ ಹಸಿರುವಾಣಿ ಸಮರ್ಪಿಸಲಾಯಿತು. ಮಹಿಳೆಯರು ಕಳಸ ಹೊತ್ತು ಸಾಗಿದರು. ವಿವಿಧ ಜಾನಪದ ಕಲಾ ಪ್ರಕಾರ, ವಾದ್ಯಮೇಳ ಮೆರವಣಿಗೆಗೆ ಮೆರುಗು ನೀಡಿತು.

ಶನಿವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ ವಾಚನ, ಗಣಯಾಗ, ನವಗ್ರಹ ಶಾಂತಿ ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಪುಣ್ಯಾಹ ವಾಚನ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತುಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಾಕಾರ ಬಲಿ, ದಿಶಾ ಹೋಮ, ಮಂಚಾದಿವಾಸ, ಕಲಶಾಧಿವಾಸ, ಅಧಿವಾಸ ಹೋಮ ನಡೆಯಿತು.

ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ.ಹೇಮರಾಜ್ ಬೆಳ್ಳಿಬೀಡು, ಕಾರ್ಯದರ್ಶಿ ನಾರಾಯಣ ಪೂಜಾರಿ ಉಚ್ಚೂರು, ಕೋಶಾಧಿಕಾರಿ ರಾಜೇಂದ್ರ ಬಳ್ಳಾಲ್, ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಜಿನೇಂದ್ರ ಬಳ್ಳಾಳ್ ಮಲ್ಲಾರಬೀಡು, ಜಿನೇಂದ್ರ ಜೈನ್ ಹರಂಬೆಟ್ಟು, ಜಯವರ್ಮ‌ ಬುಣ್ಣು ಕುಕ್ಕೆರಬೆಟ್ಟು, ಸುದರ್ಶನ ಜೈನ್ ಪಾಂಡಿಬೆಟ್ಟು, ಉದಯ ಪೂಜಾರಿ ನಾಪ, ಆದಿತ್ಯ ಪಿ.ಕೆ, ರಮೇಶ್ ಪೂಜಾರಿ ಬಲಂತ್ಯರೊಟ್ಟು, ಮರೋಡಿ ಗ್ರಾಮ‌ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.

ಇಂದಿನ ಕಾರ್ಯಕ್ರಮ: 20ರಂದು ಕೇಳ ಅನಂತ ಆಸ್ರಣ್ಣರ ನೇತೃತ್ವದಲ್ಲಿ ಬೆಳಿಗ್ಗೆ 8.30ಕ್ಕೆ ದೈವ ಹಾಗೂ ಕೊಡಮಣಿತ್ತಾಯ ದೈವಗಳ ಮಂಚ ಪ್ರತಿಷ್ಠಾಪನೆ, ಕಲಶಾಭಿಷೇಕ, ಪರ್ವ ಸಂಕ್ರಾಂತಿ, ದರ್ಶನ, ಸಂಜೆ ದೈವದ ಭಂಡಾರ ಉಚ್ಚೂರು‌ ಮನೆಯಿಂದ, ಕೊಡಮಣಿತ್ತಾಯ ದೈವದ ಭಂಡಾರ ಪಾಂಡಿಬೆಟ್ಟು ಮನೆಯಿಂದ ಆಗಮನ, ರಾತ್ರಿ ದೈವ, ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆಯಲಿದೆ.

ಬೆಳಿಗ್ಗೆ 11.30ಕ್ಕೆ ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ದೇವೇಂದ್ರ ಹೆಗ್ಡೆ, ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್ ಪಾಲ್ಗೊಳ್ಳುವರು. ರಾತ್ರಿ 8ಕ್ಕೆ ಬ್ರಹ್ಮ ಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ. ಹೇಮರಾಜ್ ಬೆಳ್ಳಿಬೀಡು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಕಟೀಲಿನ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರು ಆಶೀರ್ವಚನ ನೀಡುವರು. ಬೆಳ್ತಂಗಡಿ ಬೆಸ್ಟ್ ಫೌಂಡೇಷನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ, ಅಳಗಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಪಾಲ್ಗೊಳ್ಳುವರು. ಹೈಕೋರ್ಟ್‌ ವಕೀಲ ಪ್ರಜ್ವಲ್‌ ಬಂಗೇರ ಧಾರ್ಮಿಕ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!