ಬೆಂಗಳೂರು; ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದು, ನನ್ನ ವಿರುದ್ಧ ನಡೆದ ಷಡ್ಯಂತ್ರ ಇದಾಗಿದೆ, ಸಿಡಿ 100 ಪರ್ಸೆಂಟ್ ನಕಲಿಯಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ವಿಡಿಯೋದಲ್ಲಿರುವ ಯುವತಿಗೆ 50 ಲಕ್ಷ ರೂ. ಅಲ್ಲ, 5 ಕೋಟಿ ರೂ. ನೀಡಿರುವ ಮಾಹಿತಿ ಇದೆ. ವಿದೇಶದಲ್ಲಿ 2 ಫ್ಲ್ಯಾಟ್ ನೀಡಿರುವ ಮಾಹಿತಿ ಇದೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಿದ್ದಾರೆ.
ಯಶವಂತಪುರದ ಕಟ್ಟಡದಲ್ಲಿ ಷಡ್ಯಂತ್ರ ನಡೆದಿದೆ. ಒರಾಯನ್ ಮಾಲ್ ಅಕ್ಕಪಕ್ಕ 5 ನೇ ಮಹಡಿಯಲ್ಲಿ ಷಡ್ಯಂತ್ರ ನಡೆದಿದೆ. ಪ್ರಕರಣದ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ. ನನಗೆ ರಾಜಕಾರಣಕ್ಕಿಂತ ಕುಟುಂಬದ ಮರ್ಯಾದೆ ಮುಖ್ಯ. ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ಇಂತಹ ಕೃತ್ಯವೆಸಗಿದ್ದಾರೆ ಎಂದು ಗುಡುಗಿದ್ದಾರೆ.
ಈ ಪ್ರಕರಣದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಯಾರು ಎಷ್ಟು ದೊಡ್ಡವರಾಗಿದ್ದರೂ ಸುಮ್ಮನೆ ಬಿಡಲ್ಲ. ಎಷ್ಟೇ ಖರ್ಚಾಗಲಿ, ಏನೇ ಆಗಲಿ. ಎಷ್ಟೇ ಪ್ರಭಾವಿಗಳಾಗಿರಲಿ ಸುಮ್ಮನೆ ಬಿಡಲ್ಲ. ಅವರನ್ನು ಜೈಲಿಗೆ ಕಳುಹಿಸುತ್ತೇವೆ. ನಮಗೆ ಕುಟುಂಬದ ಗೌರವ ಮುಖ್ಯ ಎಂದು ಹೇಳಿದ್ದಾರೆ.
ಸಿಡಿಯ ವಿಚಾರವು ನನಗೆ ನಾಲ್ಕು ತಿಂಗಳ ಮೊದಲೇ ತಿಳಿದಿತ್ತು. ಸಿಡಿ ಬಿಡುಗಡೆಗೂ ಮೊದಲು 26 ಗಂಟೆಯಲ್ಲೇ ಸಿಡಿ ಬಿಡುಗಡೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ನನಗೆ ಪೋನ್ ಮಾಡಿ ತಿಳಿಸಿತ್ತು. ನೀನು ಧೈರ್ಯವಾಗಿರು. ಯಾವುದೇ ಭಯ ಬೇಡ. ಕಾನೂನು ಹೋರಾಟ ಮಾಡೋಣ ಎಂಬುದಾಗಿ ಹೇಳಿದ್ದಾರೆ.