ಸುಳ್ಯ: ದುಷ್ಕರ್ಮಿಗಳಿಂದ ಕೊಲೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ನಿವಾಸಕ್ಕೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಮುಖಂಡ ರಮಾನಾಥ ರೈ ಭೇಟಿ ನೀಡಿ ಸಾಂತ್ವನ ಹೇಳಿದರು.
ಕಾಂಗ್ರೆಸ್ ನಾಯಕರು ಮನೆಗೆ ಬರುತ್ತಿದ್ದಂತೆ ಪ್ರವೀಣ್ ಅವರ ಚಿಕ್ಕಪ್ಪ ಜಯರಾಮ ಪೂಜಾರಿ ಅವರು, ‘ನಿಮಗೆ ಬರಲು ಇಂದು ಸಮಯವಾಯಿತಾ. ಇಷ್ಟು ದಿನ ಬಾರದ ನೀವು ಇಂದು ಚೆಂದ ನೋಡಲು ಬಂದಿದ್ದೀರಾ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ನೀವು. ನೀವು ಹಿಂದುತ್ವದ ವಿರುದ್ಧ ಹೇಳಿಕೆ ನೀಡುತ್ತೀರಿ. ಹಿಂದುತ್ವವನ್ನು ನಿರ್ವಂಶ ಮಾಡುವ ಪಕ್ಷ ಕಾಂಗ್ರೆಸ್. ಹಿಂದುತ್ವಕ್ಕೆ ಕಾಂಗ್ರೆಸ್ ಪಕ್ಷ ಎಲ್ಲಿ ಬೆಂಬಲ ನೀಡುತ್ತಿದೆ’ ಎಂದು ಆಕ್ರೋಶ ಹೊರ ಹಾಕಿದರು.
‘ನನ್ನ ಬದುಕೇ ನಾಶವಾಯಿತು’ ಎಂದು ಪ್ರವೀಣ್ ಅವರ ತಾಯಿ ರತ್ನಾವತಿ ಕಣ್ಣೀರಿಟ್ಟರು.ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ ಹರಿಪ್ರಸಾದ್, ‘ಇನ್ನು ಮುಂದೆ ಈ ರೀತಿಯ ಹತ್ಯೆ ನಡೆಯಬಾರದು ಎಂಬ ಉದ್ದೇಶದಿಂದಲೇ ನಾವು ಇಲ್ಲಿಗೆ ಭೇಟಿ ನೀಡಿದ್ದೇವೆ. ಸಾಯುತ್ತಿರುವವರು ನಮ್ಮ ಮಕ್ಕಳೇ ತಾನೆ’ ಎಂದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು