ಮಂಗಳೂರು: ನಟಿ ರಕ್ಷಿತಾ ಪ್ರೇಮ್ ನವರಾತ್ರಿ ಹಿನ್ನೆಲೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.
ಪುತ್ರ ಸೂರ್ಯನೊಂದಿಗೆ ಲಲಿತಾ ಪಂಚಮಿಯ ಶುಭದಿನದಂದು ಕಟೀಲು ದೇವಳಕ್ಕೆ ಆಗಮಿಸಿದ ರಕ್ಷಿತಾ ಶ್ರೀ ದೇವಿಗೆ ಸೀರೆ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದೇವಳದ ವತಿಯಿಂದ ನಟಿ ರಕ್ಷಿತಾ ಪ್ರೇಮ್ ಅವರನ್ನು ಗೌರವಿಸಲಾಯಿತು.
ಬಳಿಕ ಮಾತನಾಡಿದ ರಕ್ಷಿತಾ, ‘ಮುಂದಿನ ತಿಂಗಳಿನಿಂದ ಹೊಸ ಸಿನಿಮಾ ಆರಂಭಿಸುವ ನಿರೀಕ್ಷೆ ಇದೆ. ನನ್ನ ಪತಿ ಪ್ರೇಮ್ ಅವರು ದರ್ಶನ್ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಅದು ಮುಂದಿನ ವರ್ಷದ ಮೇ ತಿಂಗಳಲ್ಲಿ ಶುರುವಾಗುವ ನಿರೀಕ್ಷೆಯಿದೆ.. ಕಟೀಲು ಶ್ರೀದೇವಿ ಅನುಗ್ರಹವಿಲ್ಲದೆ ಯಾವುದೇ ಕಾರ್ಯಗಳು ಸಿದ್ಧಿಯಾಗುವುದಿಲ್ಲ. ನನಗೆ ಕಟೀಲಿಗೆ ಬಂದಾಗೆಲ್ಲ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಲಲಿತಾ ಪಂಚಮಿಯ ನವರಾತ್ರಿಯ ಈ ಶುಭದಿನದಂದು ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ಭಕ್ತಾದಿಗಳು ಉಪಸ್ಥಿತರಿದ್ದರು. ಅಂದಹಾಗೆ, ಈ ತಿಂಗಳಲ್ಲಿ ಎರಡನೇ ಬಾರಿಗೆ ನಟಿ ರಕ್ಷಿತಾ ಪ್ರೇಮ್ ಅವರು ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.