ಮಂಗಳೂರು: ದುಬೈನಲ್ಲಿ ವೃತ್ತಿ ನಿರ್ವಹಿಸುತ್ತಿರುವ ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಇದೆ ಎಂದು ಆರೋಪಿಸಿ ಪತಿಯು ದ.ಕ.ಜಿಲ್ಲಾ ಎಸ್ಪಿಗೆ ದೂರು ನೀಡಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿ ಚಿದಾನಂದ ಕೆ.ಆರ್. ಎಂಬುವರು ಎಸ್ಪಿಗೆ ದೂರು ನೀಡಿದವರು.
ದೂರಿನ ಸಾರಾಂಶ:
‘ತಮ್ಮ ಪತ್ನಿ ರಾಜಿ ರಾಘವನ್ ಅವರು ಕಳೆದ 11 ವರ್ಷಗಳಿಂದ ದುಬೈನಲ್ಲಿ ಬಿ.ಆರ್.ಶೆಟ್ಟಿಯವರ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಳು. ಇತ್ತೀಚಿಗಿನ ವರ್ಷದಲ್ಲಿ ದುಬೈನಲ್ಲಿರುವ ಪಾಕಿಸ್ತಾನದ ಶಾಲೆಯೊಂದರಲ್ಲಿ ಆಯಾ ಆಗಿ ದುಡಿಯುತ್ತಿದ್ದಾಳೆ. ಜುಲೈ 11ರಂದು ಊರಿಗೆ ಬಂದಿರುವ ಆಕೆ, ತನಗೆ ಉಗ್ರ ಸಂಘಟನೆಯೊಂದಿಗೆ ನಂಟಿದ್ದು, 12 ವರ್ಷದ ಮಗಳನ್ನು ತನ್ನೊಂದಿಗೆ ಕಳುಹಿಸಬೇಕು ಎಂದು ಒತ್ತಾಯಿಸುತ್ತಿದ್ದಾಳೆ. ಅಲ್ಲದೆ ಲಕ್ಷದ್ವೀಪದಿಂದ ಮೊಹಮ್ಮದ್ ಖಾಸಿಂ ಎಂಬಾತನೂ ಕರೆ ಮಾಡಿ ನಿನ್ನ ಮಗಳನ್ನು ಪತ್ನಿಯನ್ನು ಕಳಿಸಿಕೊಡು, ಎಷ್ಟು ಹಣ ಬೇಕು ಕೇರಳಕ್ಕೆ ಬಂದಲ್ಲಿ ಕೊಡುವೆ ಎಂದು ಹೇಳುತ್ತಿದ್ದಾನೆ’ ಎಂದು ಚಿದಾನಂದ್ ಹೇಳಿದ್ದಾರೆ.
ಅಲ್ಲದೆ ಕಳುಹಿಸಿದಿದ್ದರೆ ತನ್ನ ಸಂಪರ್ಕದಲ್ಲಿರೊ ಉಗ್ರಗಾಮಿ ಸಂಘಟನೆಗಳಿಗೆ ಹೇಳುವುದಾಗಿ ಬೆದರಿಕೆ ಒಡ್ಡಿದ್ದಾಳೆ ಎನ್ನಲಾಗಿದೆ. ಇದೀಗ ಆಕೆ ಆಗಸ್ಟ್ 26ರಂದು ರಾತ್ರಿ ಮಗಳೊಂದಿಗೆ ಮಲಗಿದ್ದವಳು ನಸುಕಿನ ವೇಳೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ಆಕೆ ಹೋಗುವಾಗ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಎರಡು ಚಿನ್ನದ ಬಳೆ, 95 ಸಾವಿರ ರೂ. ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ.
ಮೊಹಮ್ಮದ್ ಖಾಸಿಂ ಎಂಬಾತನಿಂದ ಬೆದರಿಕೆ ಕರೆ.
ಚಿದಾನಂದ್ ಗೆ ಕರೆ ಮಾಡಿ, ಪತ್ನಿ ಮತ್ತು ಮಗಳನ್ನು ಕೇರಳದ ಮಲಪ್ಪುರಂಗೆ ಕರೆತರುವಂತೆ ಬೆದರಿಕೆ ಒಡ್ಡಿದ್ದಾನೆ. ಇದೀಗ ಆಕೆಯ ನಾಪತ್ತೆ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೆ ಆಕೆ ಹಿಂದಿರೋ ಉಗ್ರ ಸಂಘಟನೆ ಬಗ್ಗೆ ತನಿಖೆಗೆ ಎಸ್ಪಿಗೆ ದೂರು ನೀಡಿದ್ದಾರೆ.
ಲವ್ ಜಿಹಾದ್ ಶಂಕೆ
ಲಕ್ಷದೀಪದ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಖಾಸಿಂ ಎಂಬಾತ ಹಿಂದೂ ವಿವಾಹಿತ ಮಹಿಳೆ ರಾಜಿಯ ಸ್ನೇಹ ಬೆಳೆಸಿಕೊಂಡು ನಂತರ ಆಕೆಯನ್ನು ಉಗ್ರಗಾಮಿ ಸಂಘಟನೆಗೆ ಸೇರಿ ದೇಶ ವಿರೋಧಿ ಚಟುವಟಿಕೆಗೆ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಚಿದಾನಂದ ಕೆ.ಆರ್ ಶಂಕೆ ವ್ಯಕ್ತಪಡಿಸಿದ್ದಾರೆ.