ಉಡುಪಿ: ನಗರದ ಕೆಎಂ ಮಾರ್ಗದಲ್ಲಿರುವ ನಗರಸಭೆ ಕಚೇರಿಯ ಎದುರಿನ ಸರಕಾರಿ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ತೆಗೆದಿರುವ ಗುಂಡಿಯಲ್ಲಿ ಮಳೆ ನೀರು, ಒಸರು ನೀರು ಜಲಾಶಯದಂತೆ ಸಂಗ್ರಹಗೊಂಡಿದ್ದು,ಅಕ್ಕಪಕ್ಕದ ಕಟ್ಟಡಗಳು ಶಿಥಿಲಗೊಳ್ಳುವ ಆತಂಕ ಎದುರಾಗಿದೆ .
ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಆದರೆ ಈ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಕಾನೂನಿನ ತೊಡಕಿನ ಹಿನ್ನೆಲೆಯಲ್ಲಿ ತಡೆಯೊಡ್ಡಲಾಗಿತ್ತು.ಈ ವಿಶಾಲವಾದ ಸ್ಥಳದಲ್ಲಿ ಸುಮಾರು ಅರವತ್ತು ಅಡಿ ಆಳದ ಗುಂಡಿಯನ್ನು ತೋಡಲಾಗಿದೆ. ಇತ್ತೀಚಿಗೆ ಸುರಿಯುತ್ತಿರುವ ಭಾರಿ ಮಳೆಗೆ ಗುಂಡಿಯಲ್ಲಿ ನೀರು ತುಂಬಿಕೊಂಡು ಕೆರೆಯಂತೆ ಕಾಣುತ್ತಿದೆ.
ಗುಂಡಿಯ ಅಂಚಿನ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಬಹುಮಹಡಿ ಕಟ್ಟಡ, ವಾಸದ ಮನೆಗಳು ಇವೆ. ಇಲ್ಲಿನ ಜೇಡಿ ಮಣ್ಣು ಮೆದುವಾಗಿರುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಭೂ ವಿಜ್ಞಾನಿಗಳ ಈ ಕೂಡಲೇ ಸ್ಥಳವನ್ನು ಪರೀಕ್ಷಿಸಿ ಅವಘಡಗಳು ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.