ಬೆಳ್ತಂಗಡಿ: ದ.ಕ. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ರಾಧಾಕೃಷ್ಣ ಗೌಡ ಉಜಿರೆ (56ವ.) ಅವರು ಇಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬೆಳ್ತಂಗಡಿ, ಮಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ಇವರು ಪ್ರಸ್ತುತ ಮಂಗಳೂರು ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಸುಳ್ಯದವರಾದ ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅನೇಕ ಬಂಧುಮಿತ್ರರನ್ನು ಅಗಲಿದ್ದಾರೆ.

ಶ್ವಾಸಕೋಶದ ಸಮಸ್ಯೆಯಿಂದಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ನಿಧನದ ಸಮಯದಲ್ಲಿ ರಾಧಾಕೃಷ್ಣ ಗೌಡರು ಕೊವಿಡ್ 19 ನಿಂದಲೂ ಬಳಲುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ..
ಪ್ರತಿಭಾ ಪೋಷಕರಾಗಿದ್ದ ರಾಧಾಕೃಷ್ಣ ಗೌಡ
ಉಜಿರೆಯ ಲಲಿತನಗರದಲ್ಲಿ ಸ್ವಂತ ಮನೆ ಹೊಂದಿದ್ದ ರಾಧಾಕೃಷ್ಣ ಗೌಡರು ಮನೆಯ ಮೇಲಿನ ಅಂತಸ್ತಿನಲ್ಲಿ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಶ್ರಯದ ವ್ಯವಸ್ಥೆ ಮಾಡಿದ್ದರು. ತಮ್ಮ ಬಿಡುವಿಲ್ಲದ ಸಮಯದಲ್ಲೂ ಪ್ರತಿಯೊಬ್ಬ ವಿದ್ಯಾರ್ಥಿಯ ಶಿಕ್ಷಣ ಪ್ರಗತಿಯ ಬಗ್ಗೆ ವಿಚಾರಿಸುತ್ತಿದ್ದರು. ಅಷ್ಟೇ ಅಲ್ಲದೆ ಅನೇಕ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಿರು ಚಿತ್ರ ನಿರ್ಮಾಣ ಮಾಡಲು ಹಣಕಾಸಿನ ನೆರವು, ಶೂಟಿಂಗ್ ಗಾಗಿ ಮನೆಯನ್ನು ನೀಡಿ ಪ್ರೋತ್ಸಾಹ ಮಾಡುತ್ತಿದ್ದರು.
ಇವರ ಆಶ್ರಯದಲ್ಲಿ ಬೆಳೆದ ವಿದ್ಯಾರ್ಥಿಗಳು ಇಂದು ದೇಶದ ನಾನಾ ಕಡೆ ಖ್ಯಾತ ವಾಹಿನಿ ಮತ್ತು ಪತ್ರಿಕೆಗಳಲ್ಲಿ ಉತ್ತಮ ಹುದ್ದೆಯಲ್ಲಿ, ಉಪನ್ಯಾಸಕರಾಗಿ, ವಿವಿಧ ಸಂಸ್ಥೆಗಳಲ್ಲಿ ಉನ್ನತ ಸ್ತರದಲ್ಲಿ ಉದ್ಯೋಗದಲ್ಲಿರುವುದು ಇವರು ನೀಡಿದ ಪ್ರತಿಭಾ ಪೋಷಣೆಗೆ ಹಿಡಿದ ಕನ್ನಡಿಯಾಗಿದೆ.