ಪುತ್ತೂರು ಜೂನ್ 18: ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್ಟೆಬಲ್ವೊಬ್ಬ ಪತ್ನಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪತಿ ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನು, 5 ತಿಂಗಳ ಹಿಂದೆಯಷ್ಟೆ ಸಬ್ ರಿ ಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರ ವಿವಾಹ ನೋಂದಣಿ ನಡೆದಿತ್ತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಶಾಂತಕುಮಾರ್ ಅವರ ಪತ್ನಿ ಅಶ್ವಿನಿ ಶಾರದಾ (27) ಅವರು, ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾಗಿರುವುದಾಗಿ ದೂರು ನೀಡಿದವರು.
ಪ್ರೀತಿಸಿ ನಾವಿಬ್ಬರು ವಿವಾಹ ಆಗಿದ್ದೆವು. ಮದುವೆಯಾದ ಬಳಿಕ ಶಾಂತಕುಮಾರ್ ನನ್ನ ಜೊತೆ ಅನ್ಯೋನ್ಯತೆಯಿಂದ ಇರದೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ಹಾಗಾಗಿ ನಾನು ಪಡ್ನೂರಿನಲ್ಲಿ ನನ್ನ ತಾಯಿ ಮನೆಯಲ್ಲೇ ಇದ್ದು, ಆಗಾಗ್ಗೆ ಸಂಪ್ಯದಲ್ಲಿರುವ ಗಂಡನ ವಸತಿ ಗೃಹಕ್ಕೆ ಬಂದು ಹೋಗುತ್ತಿದ್ದೆ. ಇತ್ತೀಚೆಗೆ ನನ್ನ ಗಂಡ ನನ್ನ ಜೊತೆ ಮಾತನಾಡದೆ ನನ್ನ ಮೊಬೈಲ್ ನಂಬರ್ನ್ನೂ ಕೂಡಾ ಬ್ಲಾಕ್ ಮಾಡಿದ್ದರು. ಜೂ.16 ರಂದು ನಾನು ಮಧ್ಯಾಹ್ನ ಗಂಡನನ್ನು ಮಾತನಾಡಿಸಲೆಂದು ಪೊಲೀಸ್ ವಸತಿ ಗೃಹಕ್ಕೆ ಹೋಗಿದ್ದೆ. ಆ ಸಮಯ ನನ್ನನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೆ ಹೆಲ್ಮೆಟ್ನಿಂದ ಹಲ್ಲೆ ನಡೆಸಿದ್ದಾರೆ’ ಎಂದು ಅಶ್ವಿನಿ ಆರೋಪಿಸಿದ್ದಾರೆ.
ನನ್ನ ಗಂಡ ನನಗೆ ಪದೇ ಪದೇ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು ಮುಂದೆ ನನ್ನ ಜೀವಕ್ಕೂ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಕೋರಿದ್ದಾರೆ. ಸಂಪ್ಯ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 504, 506, 324, ಮತ್ತು 498(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಅಶ್ವಿನಿಯವರು ತಂದೆ ಮನೆಯಲ್ಲಿದ್ದಾರೆ.