ಪುತ್ತೂರು: ವ್ಯಾಪಾರ ಮಾಡುತ್ತಿದ್ದ ಅಂಗಡಿಗೆ ಅದರ ಮಾಲಕನೇ ಬೆಂಕಿ ಹಚ್ಚಿ ಅಂಗಡಿಯೊಳಗಿನ ಸಾಮಾಗ್ರಿಗಳನ್ನು ಸುಟ್ಟು ಭಸ್ಮ ಮಾಡಿದ ವಿಚಿತ್ರ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪಂಚೋಡಿ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.
ತಾಲೂಕಿನ ಈಶ್ವರಮಂಗಲದ ಮಾವಿನಕಟ್ಟೆ ನಿವಾಸಿ ಮಹಮ್ಮದ್ ತನ್ನ ಅಂಗಡಿಗೆ ಬೆಂಕಿ ಹಚ್ಚಿದ ವಿಚಿತ್ರ ವ್ಯಕ್ತಿಯಾಗಿದ್ದಾರೆ. ಹಾಡುಹಗಲೇ ಅಂಗಡಿ ಮಾಲಕ ಈ ಕೃತ್ಯವನ್ನು ನಡೆಸಿದ್ದು, ಸ್ಥಳಿಯರ ಈ ಘಟನೆಯನ್ನು ಗಮನಿಸಿದ್ದಾರೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಅಂಗಡಿಯತ್ತ ಧಾವಿಸಿದ್ದು, ಆ ವೇಳೆ ಬೆಂಕಿ ನಂದಿಸದಂತೆ ಮಾಲಕ ಮಹಮ್ಮದ್ರವರು ತಡೆದಿದ್ದಾರೆ. ಆದರೆ ಮಹಮ್ಮದ್ ಅಲ್ಲಿಂದ ತೆರಳಿದ ಬಳಿಕ ಸ್ಥಳೀಯರು ಅಂಗಡಿಯೊಳಗಿನ ಬೆಂಕಿಯನ್ನು ನಂದಿಸಿದ್ದಾರೆ.
ಈ ವೇಳೆಗೆ ಸ್ಥಳೀಯರು ಪೊಲೀಸರಿಗೂ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸ್ ಠಾಣಾ ಎಎಸ್ಐ ತಿಮ್ಮಯ್ಯಗೌಡ, ಈಶ್ವರಮಂಗಲ ಹೊರಠಾಣಾ ಪೊಲೀಸ್ ಸಿಬ್ಬಂದಿ ಬಸವರಾಜ್, ಪ್ರಶಾಂತ್ ಮತ್ತಿತರರು ಆಗಮಿಸಿ ಬೆಂಕಿ ನಂದಿಸಲು ಸಹಕಾರ ನೀಡಿದರು.
ಕಳೆದ ನಾಲ್ಕು ವರ್ಷಗಳಿಂದ ಇದೇ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಅಂಗಡಿಯಲ್ಲಿ ಸ್ಟೇಷನರಿ ಸಾಮಾಗ್ರಿ ಮತ್ತು ಚಹಾ ಹೊಂದಿರುವ ಸಣ್ಣ ಕ್ಯಾಂಟೀನ್ ಕೂಡಾ ಅದರೊಳಗಿತ್ತು.
ಅವಘಡದಿಂದ ಅಂಗಡಿಯೊಳಗಿದ್ದ ಸುಮಾರು 15 ಸಾವಿರಕ್ಕೂ ಹೆಚ್ಚು ಸ್ಟೇಷನರಿ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿದೆ. ಅಂಗಡಿಯೊಳಗೆ ಚಹಾ ಮಾಡಲು ಇಟ್ಟಿದ್ದ ಸ್ಟೌವ್ನ ಸಣ್ಣ ಗಾತ್ರದ ಸಿಲಿಂಡರ್ ಬೆಂಕಿಗೆ ಆಹುತಿಯಾಗಿ ಸ್ಪೋಟಗೊಂಡಿದ್ದರೂ ಯಾವುದೇ ಹೆಚ್ಚಿನ ಅನಾಹುತ ಉಂಟಾಗಿಲ್ಲ. ಅಂಗಡಿಯ ಮಾಡು ಹೊರತುಪಡಿಸಿ ಉಳಿದೆಲ್ಲವೂ ಬೆಂಕಿಗಾಹುತಿಯಾಗಿವೆ.
ಮಹಮ್ಮದ್ ಅವರು ಏಕಾಏಕಿ ತನ್ನ ಅಂಗಡಿಗೆ ಬೆಂಕಿ ಹಚ್ಚಿದ್ದು ಸ್ಥಳಿಯರಲ್ಲಿ ಅಚ್ಚರಿಯನ್ನು ಹುಟ್ಟಿಸಿದೆ. ಘಟನೆಗೆ ಕಾರಣ ಏನೆಂದು ತಿಳಿಯಲು ಪೊಲೀಸರು ಮಹಮ್ಮದ್ರನ್ನು ವಿಚಾರಣೆ ನಡೆಸುತ್ತಿದ್ದಾರೆ.