ಪುತ್ತೂರು: ಬೀದಿ ಬದಿ ತಳ್ಳುಗಾಡಿಯಲ್ಲಿ ಕಬಾಬ್ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಇಂದು ಪುತ್ತೂರು – ಉಪ್ಪಿನಂಗಡಿ ರಸ್ತೆಯ ಪಡೀಲು ಸರಕಾರಿ ಬಾವಿಯಲ್ಲಿ ಪತ್ತೆಯಾಗಿದೆ.
ಪಡೀಲು ಸಮೀಪ ಹಲವಾರು ಸಮಯಗಳಿಂದ ತಳ್ಳುಗಾಡಿಯಲ್ಲಿ ಚಿಕನ್ ಕಬಾಬ್ ವ್ಯಾಪಾರ ನಡೆಸುತ್ತಿದ್ದ ನಂದಿಲ ನಿವಾಸಿ ವಿಠಲ ನಾಯ್ಕ್ (63ವ) ರವರು ಮೃತಪಟ್ಟವರು.
ಕೋವಿಡ್-19 ವೈರಸ್ ಹರಡದಂತೆ ಲಾಕ್ಡೌನ್ ಬಳಿಕ ಸಂಕಷ್ಟಕ್ಕೆ ಒಳಗಾದ ಅವರು ಲಾಕ್ಡೌನ್ ಸಡಿಲಿಕೆ ಬಳಿಕ ಮತ್ತೆ ತನ್ನ ವ್ಯವಹಾರ ಆರಂಭಿಸಿದ್ದರೂ ನಡುವೆ ಅನಾರೋಗ್ಯ ಅವರನ್ನು ಕಾಡಿತ್ತೆನ್ನಲಾಗಿದೆ. ಜೂ.10ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಹೊರಗೆ ಹೋದವರು ಮತ್ತೆ ನಾಪತ್ತೆಯಾಗಿದ್ದರು. ಈ ಕುರಿತು ಮನೆ ಮಂದಿ ಪರಿಸರದಲ್ಲಿ ಹಡುಕಾಡಿದರೂ ಪತ್ತೆಯಾಗಿರಲಿಲ್ಲ.
ಜೂ. 11ರಂದು ಪಡೀಲು ಸರಕಾರಿ ಬಾವಿಯ ಕಟ್ಟೆಯಲ್ಲಿ ಚಪ್ಪಲಿ ಮತ್ತು ವೇಸ್ಟಿಯೊಂದನ್ನು ಕಂಡ ಕೆಲವರು ಸಂಶಯ ವ್ಯಕ್ತಪಡಿಸಿ ಬಾವಿಯನ್ನು ನೋಡಿದಾಗ ವ್ಯಕ್ತಿಯೊಬ್ಬರ ಮೃತ ದೇಹ ಬಾವಿಯಲ್ಲಿರುವುದು ಪತ್ತೆಯಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ.