ಪುತ್ತೂರು; ಇಲ್ಲಿನ ಮುಂಡೂರು ಸಮೀಪದ ಕಂಪದಲ್ಲಿ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯದ ಕನಕಮಜಲಿನ ಯುವಕ ಉಮೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಯುವತಿಯ ತಾಯಿ ನೀಡಿದ ದೂರಿನಲ್ಲಿ ಏನಿದೆ:
ಮಗಳು ಬಿ.ಎಸ್.ಸಿ. ಪದವಿ ಮುಗಿಸಿ, ಮನೆಯಲ್ಲಿಯೇ ಇದ್ದಳು. 17.01.2023ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ ತಾನು ತೋಟಕ್ಕೆ ಹೋಗಿದ್ದ ವೇಳೆ ಆಕೆ ಮನೆಯಲ್ಲಿದ್ದಳು. ಬೆಳಿಗ್ಗೆ ಸಮಯ ಸುಮಾರು 11.30 ಗಂಟೆಯ ವೇಳೆಗೆ ಅಮ್ಮಾ ಎಂದು ಕೂಗಿಕೊಂಡು ಓಡಿ ಬಂದು ತನ್ನ ಹೊಟ್ಟೆಯಲ್ಲಿ ಗಾಯವಾಗಿ ರಕ್ತ ಸ್ರಾವವಾಗುತ್ತಿರುವುದುದನ್ನು ತಿಳಿಸಿದ್ದು ಕೂಡಲೇ ಆಟೋ ರಿಕ್ಷಾದಲ್ಲಿ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮಗಳನ್ನು ಕನಕಮಜಲಿನ ಉಮೇಶ ಎಂಬವನು ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತನು ಆಗ್ಗಾಗ್ಗೆ ಮನೆಗೂ ಬರುತ್ತಿದ್ದನು. ಆದರೆ ಇತ್ತೀಚೆಗೆ ಅವನ ಗುಣ ನಡತೆ ಮಗಳಿಗೆ ಇಷ್ಟವಾಗದ ಕಾರಣ ಆತನನ್ನು ದೂರ ಮಾಡಿದ್ದಳು.ಈ ವಿಷಯದಲ್ಲಿ ಆತ ಅಸಮಾಧಾನದಿಂದ ಇದ್ದು ಈ ಕೃತ್ಯವನ್ನು ಆತನೇ ಮಾಡಿರುವ ಸಾಧ್ಯತೆ ಇರುವುದಾಗಿ ಸಂಶಯ ವ್ಯಕ್ತ ಪಡಿಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಲ್ಲದೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಯಶ್ರೀ ಈ ಮೊದಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲ ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದಳು ಎಂದು ತಿಳಿದು ಬಂದಿದೆ.ಯುವತಿಯ ತಂದೆ ದಿ.ಗುರುವಪ್ಪ ಅವರು ಕಳೆದ ವರ್ಷ ಕೋವಿಡ್ ನಿಂದ ಮೃತಪಟ್ಟಿದ್ದರು. ಇದೀಗ ಮಗಳನ್ನು ಕೂಡ ತಾಯಿ ಕಳೆದುಕೊಂಡಿದ್ದು ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ.