ಪುತ್ತೂರು ದರ್ಬೆ ಗಲಾಟೆ: ಜನಸೇವಾ ಕೇಂದ್ರದ ಗೊಂದಲದಿಂದ 3 ಪ್ರತ್ಯೇಕ ದೂರುಗಳು ದಾಖಲು
ಪುತ್ತೂರು: ನಗರದ ದರ್ಬೆಯ ‘ಡ್ರೀಮ್ ಡೆಸ್ಟಿನೇಷನ್’ ಜನಸೇವಾ ಕೇಂದ್ರದಲ್ಲಿ ದಾಖಲೆಗಳ ಲ್ಯಾಮಿನೇಷನ್ ವಿಚಾರವಾಗಿ ಶುರುವಾದ ಗಲಾಟೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪ್ರಕರಣ 1: ಮಹಿಳೆ ಹಾಗೂ ಕುಟುಂಬದ ಮೇಲೆ ಹಲ್ಲೆ ಆರೋಪ; ಸುಳ್ಯ ಜಾಲ್ಸೂರಿನ ಫಾತಿಮತ್ ಮಿಸ್ವಾನ ನೀಡಿರುವ ದೂರಿನಂತೆ, ಆ.21ರಂದು ಜನಸೇವಾ ಕೇಂದ್ರಕ್ಕೆ ನೀಡಿದ್ದ ದಾಖಲೆ ಹಾಳಾಗಿದ್ದಕ್ಕೆ ಆಕ್ಷೇಪಿಸಿದಾಗ ಅಂಗಡಿಯ ಅಂಜನಾ ಪೈ ಹಾಗೂ ಸುದರ್ಶನ ಪೈ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುದರ್ಶನ ಪೈ ಅವರನ್ನು ಬಂಧಿಸಿದ್ದು, ನ್ಯಾಯಾಲಯ ಸೆಪ್ಟೆಂಬರ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣ 2: ಅಂಗಡಿ ಮಾಲೀಕರಿಂದ ಪ್ರತಿ ದೂರು; ಜನಸೇವಾ ಕೇಂದ್ರದ ಮಾಲೀಕರು ನೀಡಿದ ದೂರಿನಂತೆ, ತಾಂತ್ರಿಕ ದೋಷದಿಂದ ದಾಖಲೆ ಹಾಳಾದಾಗ ಪರಿಹಾರ ಕೇಳಿ ಗಲಾಟೆ ಎಬ್ಬಿಸಿದ ಫಾತಿಮಾತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ₹10,000 ಹಣಕ್ಕೆ ಬೇಡಿಕೆ ಇಟ್ಟು, ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧವೂ ಪ್ರಕರಣ ದಾಖಲಾಗಿದೆ
ಪ್ರಕರಣ 3: ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಘಟನಾ ಸ್ಥಳದಲ್ಲಿ ಸಾರ್ವಜನಿಕರು ಸೇರಿ ಗಲಾಟೆ ಮಾಡುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜಾ ಮತ್ತು ಸಿಬ್ಬಂದಿ ಜನರನ್ನು ಚದುರಿಸಲು ಯತ್ನಿಸಿದ್ದಾರೆ. ಈ ವೇಳೆ ಗಲಾಟೆ ನಿಗ್ರಹಿಸಲು ಬಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಿಯಾಝ್, ನೌಶಾದ್ ಹಾಗೂ ಇತರರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


