ಮಂಗಳೂರು: ಇಲ್ಲಿನಕಂಕನಾಡಿ ಬೈಪಾಸ್ನ ರಸ್ತೆಯಲ್ಲಿರುವ ಹೊಟೇಲೊಂದರ ಕ್ಯಾಶ್ ಕೌಂಟರ್ ನಲ್ಲಿದ್ದ ಕಾಣಿಕೆ ಡಬ್ಬವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಸೀಫ್ ಕುಕ್ಕಾಜೆ ಎಂಬಾತನಿಗೆ 2ನೇ ಸಿಜೆಎಂ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣದ 2ನೇ ಆರೋಪಿ ಇಲ್ಯಾಸ್ ಎಂಬಾತನನ್ನು ಸಾಕ್ಷಿಯ ಕೊರತೆಯಿಂದ ಖುಲಾಸೆಗೊಳಿಸಿದೆ.
2021ರ ಮಾರ್ಚ್ 15ರಂದು ನಗರದ ಕಂಕನಾಡಿ ಬೈಪಾಸ್ ರಸ್ತೆಯುಲ್ಲಿರುವ ನವೀನ್ ಎಂಬವರ ಮಾಲಕತ್ವದ ಐಸಿರಿ ಎಂಬ ಹೊಟೇಲ್ನ ಕ್ಯಾಶ್ ಕೌಂಟರ್ನ ಮೇಲೆ ಇಟ್ಟಿದ್ದ ಕಂಕನಾಡಿ ಪಡುಮಲೆ ಕಲ್ಲುರ್ಟಿ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಇರಾ ಕುಕ್ಕಾಜೆ ಬೈಲು ಆಸೀಫ್ ಕುಕ್ಕಾಜೆ (28) ಮತ್ತು ಇರಾ ಮಂಚಿಕಟ್ಟೆ ಇಲ್ಯಾಸ್ (30) ಎಂಬವರನ್ನು ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಬಂಧಿಸಿದ್ದರು.
ಹೋಟೆಲ್ ಮಾಲೀಕರ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಂದ ಕಳವು ಮಾಡಿದ ಕಾಣಿಕೆ ಡಬ್ಬ ಹಾಗೂ 705.50 ರೂ.ವನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಾದ ಪ್ರತಿವಾದವನ್ನು ಆಲಿಸಿದ 2ನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಮಧುಕರ ಪಿ. ಭಾಗವತ್ ಕೆ. ನ.23ರಂದು 1ನೇ ಆರೋಪಿ ಮುಹಮ್ಮದ್ ಆಸೀಫ್ ಕುಕ್ಕಾಜೆ ತಪ್ಪಿತಸ್ಥನೆಂದು ನಿರ್ಣಯಿಸಿ ಭಾರತೀಯ ದಂಡ ಸಂಹಿತೆ ಕಲಂ:380ರಡಿಯ ಅಪರಾಧಕ್ಕಾಗಿ 1 ವರ್ಷ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 10 ದಿನಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸಬೇಕು ಎಂದು ಆದೇಶದಲ್ಲಿ ವಿವರಿಸಿದ್ದಾರೆ. ಪ್ರಕರಣದ 2ನೇ ಆರೋಪಿ ಇಲ್ಯಾಸ್ನನ್ನು ಸಾಕ್ಷ್ಯಾಧಾರದ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.
ಸರಕಾರದ ಪರವಾಗಿ 2ನೇ ಸಿಜೆಎಂ ನ್ಯಾಯಾಲಯದ ಹಿರಿಯ ಸಹಾಯಕ, ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.