Thursday, June 4, 2026
Homeತಾಜಾ ಸುದ್ದಿಮಂಗಳೂರು: ಡಿ.ಕೆ.ಶಿವಕುಮಾರ್ ನಿಂದಿಸಿದ್ದ ಆರೋಪಿಗೆ ಜೈಲು ಶಿಕ್ಷೆ ಪ್ರಕಟ

ಮಂಗಳೂರು: ಡಿ.ಕೆ.ಶಿವಕುಮಾರ್ ನಿಂದಿಸಿದ್ದ ಆರೋಪಿಗೆ ಜೈಲು ಶಿಕ್ಷೆ ಪ್ರಕಟ

- Advertisement -
- Advertisement -

ಮಂಗಳೂರು: ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ಫೋನ್ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದ ಆರೋಪದಡಿ ಸುಳ್ಯದ ವ್ಯಕ್ತಿಯೊಬ್ಬರಿಗೆ ಸುಳ್ಯ ನ್ಯಾಯಾಲಯ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ನ್ಯಾಯಾಧೀಶರಾದ ಸೋಮೇಶೇಖರ್ ಅವರಿಂದ ತೀರ್ಪು ಪ್ರಕಟವಾಗಿದ್ದು, ಡಿಕೆಶಿಗೆ ನಿಂದಿಸಿದ್ದ ಆರೋಪ ಹೊತ್ತಿದ್ದ ಸುಳ್ಯ ತಾಲೂಕಿನ ಬೆಳ್ಳಾರೆಯ ಗಿರಿಧರ್ ರೈಗೆ ಎರಡು ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. 2016ರಲ್ಲಿ ಡಿಕೆಶಿ ಇಂಧನ ಸಚಿವರಾಗಿದ್ದ ವೇಳೆ ನಡೆದಿದ್ದ ಪ್ರಕರಣ ಇದಾಗಿದ್ದು, ಸುಳ್ಯ ತಾಲೂಕಿನ ಬೆಳ್ಳಾರೆಯ ಗಿರಿಧರ್ ರೈ ಎಂಬುವರಿಂದ 2016ರ ಫೆ.28ರಂದು ಡಿಕೆಶಿಗೆ ಕರೆ ಬಂದಿತ್ತು.

ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದ್ದ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಗಿರಿಧರ್ ರೈ ತನಗೆ ಅವಾಚ್ಯವಾಗಿ ನಿಂದಿಸಿದ್ದ ಎಂದು ಡಿಕೆಶಿ ಆರೋಪಿಸಿದ್ದರು. ಈ ಹಿನ್ನೆಲೆ ಅಂದಿನ ಮೆಸ್ಕಾಂ ಎಂಡಿ ಮೂಲಕ ಗಿರಿಧರ್ ವಿರುದ್ದ ಪೊಲೀಸ್ ದೂರು ಕೊಡಿಸಿದ್ದರು. ಹೀಗಾಗಿ ಕೇಸು ದಾಖಲಿಸಿಕೊಂಡ ಪೊಲೀಸರು ರಾತ್ರೋರಾತ್ರಿ ಗಿರಿಧರ್ ರೈ ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ಸುಳ್ಯ ಕೋರ್ಟ್ ನಲ್ಲಿ ನಡೆಯುತ್ತಿತ್ತು.

ಸಾಕ್ಷ್ಯ ನುಡಿಯಲು ವಾರೆಂಟ್ ಜಾರಿಯಾಗಿದ್ದ ಹಿನ್ನೆಲೆ 2021ರ ಅಕ್ಟೋಬರ್ 5ರಂದು ಡಿಕೆಶಿ ಸುಳ್ಯಕ್ಕೆ ಆಗಮಿಸಿ, ಗಿರಿಧರ್ ರೈ ವಿರುದ್ದ ಸುಳ್ಯ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದರು. ನಾಲ್ಕು ಅಪರಾಧಗಳಲ್ಲಿಯೂ  2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ 5 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದ್ದು, 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ  ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.  ಆರೋಪಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ.  ಪ್ರಾಸಿಕ್ಯೂಷನ್ ಪರವಾಗಿ ಎಪಿಪಿ ಜನಾರ್ಧನ ಬಿ. ವಾದಿಸಿದ್ದರು. ಘಟನೆಯ ಕುರಿತಂತೆ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು

- Advertisement -

Latest News

error: Content is protected !!