ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಷರತ್ತಿಗೆ ಒಳಪಟ್ಟು ಆ.30 ರಿಂದ ಹಂತಹಂತವಾಗಿ ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಹಾಗೂ ಮುಂದಿನ 2 ವಾರಗಳ ಕಾಲ ಪ್ರೌಢ ಶಾಲೆಗಳ ಭೌತಿಕ ತರಗತಿ ಆರಂಭಿಸದೆ ಇರಲು ಜಿಲ್ಲಾಡಳಿತ ನಿರ್ಧರಿಸಿದೆ.
ಶಾಲಾರಂಭದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಚಿವ ಎಸ್. ಅಂಗಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಹಾಗೂ ಕೊವೀಡ್ ನಿಯಂತ್ರಣ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.ಕಾಲೇಜುಗಳ ಆಡಳಿತ ಮಂಡಳಿಗಳು ಯಾವ ರೀತಿ ತರಗತಿ ನಡೆಸಬಹುದು ಎನ್ನುವ ಬಗ್ಗೆ ಅವರಿಂದಲೇ ವರದಿ ಕೇಳಲಾಗಿದ್ದು, ಮನೆಯಿಂದ ನೇರವಾಗಿ ಕಾಲೇಜಿಗೆ ಬರುವವರು ಹಾಗೂ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ತರಗತಿಗೆ ಹಾಜರಾಗುವವರನ್ನು ಯಾವ ರೀತಿ ತರಗತಿಯಲ್ಲಿ ಕುಳ್ಳಿರಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಇನ್ನು ಪಿಯು ಆರಂಭಕ್ಕೆ ಷರತ್ತುಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಆರ್ ಟಿಸಿಪಿಆರ್ ವರದಿ ತರಬೇಕು. ಸೋಂಕಿತರು 7 ದಿನ ಕಡ್ಡಾಯವಾಗಿ ಕ್ಷಾರಂಟೈನ್ನಲ್ಲಿರಬೇಕು, ಕ್ವಾರಂಟೈನ್ನಿಂದ ಹೊರಬಂದ ನಂತರ ಮತ್ತೊಮ್ಮೆ ಆರ್ ಟಿಸಿಪಿಆರ್ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗ ಲಕ್ಷಣಗಳು ಕಂಡುಬಂದರೆ ಸ್ಥಳೀಯ ಆಡಳಿತಕ್ಕೆ ತಿಳಿಸಬೇಕು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಷರತ್ತಿಗೊಳಪಟ್ಟು ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡದೆ ಇರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಎಫ್ ಐ ಆರ್ ದಾಖಲಿಸಲು ಸೂಚಿಸಿದ್ದು,ಬೇರೆ ಜಿಲ್ಲೆಗಳಿಂದ ನೆಗೆಟಿವ್ ವರದಿಯೊಂದಿಗೆ ಬಂದಂತಹ 900 ವಿದ್ಯಾರ್ಥಿಗಳು ಈಗ ಪಾಸಿಟಿವ್ ಆಗಿದ್ದಾರೆ. ಆ ವಿದ್ಯಾ ಸಂಸ್ಥೆಗಳಿಗೆ ನೋಟೀಸ್ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಸಂಜೀವ ಮಠಂದೂರು, ಪ್ರಾಪ್ ಚಂದ್ರ ನಾಯಕ್ ಭಾಗವಹಿಸಿದ್ದರು.