ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ ವ್ಯಕ್ತವಾಗಿದೆ. ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಶಿಷ್ಟಾಚಾರ ಉಲ್ಲಂಘನೆ ವಿಚಾರ ಪ್ರಸ್ತಾಪ ಮಾಡಿದ್ದಾರೆ.
ಫೆಬ್ರವರಿ 3 ರಂದು ವಿಧಾನ ಪರಿಷತ್ ಸಭಾಪತಿಯವರು ಮಂಗಳೂರು ಪ್ರವಾಸ ಕೈಗೊಂಡಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಗೆ ಪ್ರವಾಸ ವೇಳಾಪಟ್ಟಿ ಕಳಿಸಲಾಗಿತ್ತು. ಮಂಗಳೂರಿಗೆ ತಲುಪಿದ ಬಳಿಕ ಸಭಾಪತಿಗಳು ಕರೆ ಮಾಡಿದರೂ ಡಿಸಿ ಎಂ.ಆರ್. ರವಿಕುಮಾರ್ ಸ್ಪಂದಿಸಿಲ್ಲ ಎಂದು ಸದನದಲ್ಲಿ ಅರೋಪಿಸಲಾಗಿದೆ.
ಜಿಲ್ಲಾಧಿಕಾರಿ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ಡಿಸಿ ಆಪ್ತ ಸಹಾಯಕ ಹೇಳಿದ್ದು, ಸೌಜನ್ಯಕ್ಕೂ ಸಭಾಪತಿಗಳನ್ನು ಭೇಟಿಯಾಗದ ಕಾರಣ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು ಕೂಡಲೇ ಶಿಸ್ತು ಕ್ರಮ ಆಗಬೇಕು ಎಂದು ಸದನದಲ್ಲಿ ಮರಿತಿಬ್ಬೇಗೌಡ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.
ಸದಸ್ಯರ ಒತ್ತಾಯಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರ ಕಳುಹಿಸುವಂತೆ ಮರಿತಿಬ್ಬೇಗೌಡರಿಗೆ ಸೂಚಿಸಿದ್ದು, ತನಿಖೆ ಮಾಡಿಸಿ ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ ಕ್ರಮ ಆಗುತ್ತದೆ ಎಂದು ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ.