ಸುಳ್ಯ: ಕ್ರಿಶ್ಚಿಯನ್ ಸಮುದಾಯದವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಸೈಂಟ್ ಬ್ರಿಜಿಡ್ಸ್ ಚರ್ಚ್ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಕ್ರಿಶ್ಚಿಯನ್ ಬಾಂಧವರು ಸುಳ್ಯದ ಜ್ಯೋತಿ ವೃತ್ತದ ಬಳಿ ಇಂದು ಮೌನ ಪ್ರತಿಭಟನೆ ನಡೆಸಿದರು.
ರಾಜ್ಯಸರ್ಕಾರ ಮತಾಂತರ ಕಾಯ್ದೆಯನ್ನು ಜಾರಿಗೆ ತಂದು ದೇಶದ ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕನ್ನು ಕಸಿಯುವ ಮೂಲಕ ಕ್ರಿಶ್ಚಿಯನ್ ಸಮುದಾಯದವರ ಮೇಲೆ ವಿನಾಕಾರಣ ದಬ್ಬಾಳಿಕೆ ನಡೆಸುತ್ತಿದ್ದಾರೆ ಹಾಗೂ ಹಲವಾರು ಕಡೆಗಳಲ್ಲಿ ಚರ್ಚುಗಳ ಮೇಲೆ ದಾಳಿ ನಡೆಸುವ ಮೂಲಕ ಕಿಡಿಗೇಡಿಗಳು ಅಟ್ಟಹಾಸವನ್ನು ಮೆರೆಯುತ್ತಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದು ಮೌನ ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ಬಗ್ಗೆ ಸುದ್ದಿಗೆ ಮಾಹಿತಿ ನೀಡಿದ ಸುಳ್ಯದ ಸೈಂಟ್ ಬ್ರಿಜೆಡ್ ಚರ್ಚ್ ನ ಫಾದರ್ ವಿಕ್ಟರ್ ರವರು ‘ಕ್ರಿಶ್ಚಿಯನ್ ಸಮು ದಾಯದವರ ಮೇಲೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ದಬ್ಬಾಳಿಕೆಗಳು ಹೆಚ್ಚುತ್ತಿದ್ದು, ಮತಾಂತರ ವಿಷಯದ ಆರೋಪವನ್ನು ನಮ್ಮಸಮುದಾಯದವರ ಮೇಲೆ ಹೊರಿಸಿ ನಮ್ಮ ಸಮುದಾಯದವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ.ನಮ್ಮಲ್ಲಿ ಸಹಾಯ ಕೇಳಿಬರುವ ಬಡವರಿಗೆ ಸಹಾಯವನ್ನು ನೀಡಲು ಭಯಪಡುವ ಕಾಲ ಬಂದಿದೆ.ಬಡವರಿಗೆ ಸಹಾಯ ನೀಡಲು ಮುಂದಾದರೆ ಆಮಿಷವನ್ನು ತೋರಿಸಿ ಮತಾಂ ತರ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ.
ಹಾಗೂ ರಾಜ್ಯ ಸರ್ಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿ ಭಾರತ ದೇಶದ ಸಂವಿಧಾನದಲ್ಲಿ ನೀಡಿರುವ ಧರ್ಮದ ಹಕ್ಕನ್ನು ಕಸಿಯುವ ಮೂಲಕ ಕ್ರಿಶ್ಚನ್ ಸಮುದಾಯದವರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಹೇಳಿದರು. ಈ ಎಲ್ಲಾ ಕ್ರಮಗಳನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಇಂದು ನಾವು ನಮ್ಮಚರ್ಚ್ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ಮಾಡುವ ಮೂಲಕ ಸರಕಾರವನ್ನು ಎಚ್ಚರಿಸುವ ಕಾರ್ಯ ಮಾಡು ತ್ತಿದ್ದೇವೆ.
ಅದೇ ರೀತಿ ಹಲವಾರು ಕಡೆಗಳಲ್ಲಿ ನಮ್ಮಧಾರ್ಮಿಕ ಕೇಂದ್ರವಾದ ಚರ್ಚ್ ಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಚರ್ಚ್ ಪಾಲನ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ಹಾಗೂ ಸದಸ್ಯರು, ಹಾಗೂ ನೂರಾರು ಮಂದಿ ಕ್ರಿಶ್ಚಿಯನ್ ಬಾಂಧವರು ಪಾಲ್ಗೊಂಡಿದ್ದರು.