ಮಂಗಳೂರು: ನಯಾರ ಎನರ್ಜಿ ಕಂಪನಿ ಏಕಾಏಕಿ ಯಾವುದೇ ಮುನ್ಸೂಚನೆಯಿಲ್ಲದೆ ರಾಜ್ಯಾದ್ಯಂತ ಇರುವ ಪೆಟ್ರೋಲ್ ಬಂಕ್ ಗಳಿಗೆ ತೈಲ ಸರಬರಾಜು ಸ್ಥಗಿತಗೊಳಿಸಿದೆ. ಪರಿಣಾಮ ಪೆಟ್ರೋಲ್ ಬಂಕ್ ಮಾಲೀಕರು ಅನಿವಾರ್ಯವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಆದ್ದರಿಂದ ತಕ್ಷಣ ಕಂಪೆನಿಯು ತೈಲ ಸರಬರಾಜು ಮಾಡಬೇಕೆಂದು ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರು ನಗರದ ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿರುವ ನಯಾರ ಡೀಪೊದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ನಯಾರ ಎನರ್ಜಿ ಕಂಪೆನಿಯಿಂದ ಮಾನ್ಯತೆ ಪಡೆದ ಸುಮಾರು 500-600 ಪೆಟ್ರೋಲ್ ಬಂಕ್ ಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿದೆ. ಮಾಲೀಕರು 1-2 ಕೋಟಿ ರೂ. ನಯಾರ ಕಂಪೆನಿಗೆ ಖರ್ಚು ಮಾಡಿ ಪೆಟ್ರೋಲ್ ಬಂಕ್ ಅನ್ನು ಆರಂಭಿಸಿದ್ದರು. ಆದರೆ ಮಾರ್ಚ್ 23ರಿಂದ ಸ್ಟಾಕ್ ಇದ್ದರೂ ಕಂಪೆನಿಯು ಸರಿಯಾಗಿ ತೈಲ ಪೂರೈಕೆ ಮಾಡುತ್ತಿಲ್ಲ. ತಾವು ಬೇಡಿಕೆ ಇಟ್ಟಿರುವಷ್ಟು ತೈಲಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ನಯಾರ ಕಂಪೆನಿಗೆ ಪಾವತಿ ಮಾಡಿದ್ದರೂ, ನಮಗೆ ಇನ್ನೂ ತೈಲ ಪೂರೈಕೆ ಆಗಿಲ್ಲ. ಪರಿಣಾಮ 5-6 ದಿನಗಳಿಂದ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ತಿಳಿಸಿದ್ದಾರೆ.
ಆದ್ದರಿಂದ ತಕ್ಷಣ ದ.ಕ.ಜಿಲ್ಲಾಧಿಕಾರಿಯವರು ನಯಾರ ಎನರ್ಜಿ ಕಂಪೆನಿಯ ಡಿಪೋಗೆ ಬಂದು ತೈಲ ಸ್ಟಾಕ್ ಅನ್ನು ಪರೀಕ್ಷಿಸಿ ತಕ್ಷಣದಿಂದ ನಮಗೆ ತೈಲ ಪೂರೈಕೆ ಮಾಡಬೇಕು. ಇಲ್ಲದಿದ್ದಲ್ಲಿ ತಾವು ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.