ಬೆಂಗಳೂರು: ನಟ ಚೇತನ್ ಕೆಲ ದಿನಗಳ ಹಿಂದೆ ಕಾಂತಾರ ಚಿತ್ರದ ಬಗ್ಗೆ ಮಾತನಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೀಗ ಪಾಕಿಸ್ತಾನ್ ಜಿಂದಾಬಾದ್ ಎಂದ ವಿದ್ಯಾರ್ಥಿಗಳ ಪರ ಪೋಸ್ಟ್ ಹಾಕಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ.
ನಿನ್ನೆ (ನ.17) ಬೆಂಗಳೂರಿನ ನ್ಯೂ ಹೊರೈಜನ್ ಕಾಲೇಜಿನ ಇಂಜಿನಿಯರಿಂಗ್ ಮೊದಲ ವರ್ಷದ ಆರ್ಯನ್, ದಿನಕರ್, ರಿಯಾ ಎಂಬ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದರು. ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ನಟ ಚೇತನ್ ಅದು “ನಿನ್ನೆ ನಡೆದ ಕಾಲೇಜು ಫೆಸ್ಟ್ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ. ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು – ನಮ್ಮ ಶತ್ರುಗಳಲ್ಲ. ವಾಕ್ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕು”, ಎಂದು ಬರೆದುಕೊಳ್ಳುವ ಮೂಲಕ ಸಾರ್ವಜನಿಕರಿಂದ ತೀರ್ವ ಟೀಕೆಗೆ ಒಳಗಾಗುತ್ತಿದ್ದಾರೆ.