ಕುಂದಾಪುರ: ಸೆಪ್ಟೆಂಬರ್ ನಲ್ಲಿ ಕತಾರ್ ನ ಬೋಹಾದಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಕಿವುಡರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತೀಯ ತಂಡದ ಅಂತಿಮ 15 ಮಂದಿಯ ತಂಡವನ್ನು ಪ್ರಕಟಸಿದ್ದು, ಕುಂದಾಪುರದ ಪ್ರಥ್ವಿರಾಜ್ ಶೆಟ್ಟಿ ಹುಂಚನಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬೈಂದೂರು ತಾಲೂಕು ಕೊಲ್ಲೂರು ಗೋಳಿಹೊಳೆ ಗ್ರಾಮದ ಪ್ರಥ್ವಿರಾಜ್ ಶೆಟ್ಟಿ ವೇಗದ ಬೌಲರ್ ಹಾಗೂ ಕರ್ನಾಟಕ ಕಿವುಡರ ಕ್ರಿಕೆಟ್ ನಾಯಕನಾಗಿ ಗುರುತಿಸಿಕೊಂಡಿದ್ದು, ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸಾಮರ್ಥ್ಯವಿದ್ದರೆ ನ್ಯೂನತೆಗಳು ಅಡ್ಡಿಯಾಗಲ್ಲ ಎನ್ನುವುದಕ್ಕೆ ಪ್ರಥ್ವಿರಾಜ್ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು. ಹುಟ್ಟಿನಿಂದ ಕಿವುಡರಾಗಿದ್ದ ಪ್ರಥ್ವಿರಾಜ್ ಗೆ ಉತ್ತಮ ಕ್ರಿಕೆಟ್ ಆಟಗಾರನಾಗಬೇಕು ಎನ್ನುವ ಆಸೆಯಿದ್ದು, ಇದೀಗ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಭಾರತ ಕಿವುಡರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪ್ರಥ್ವಿರಾಜ್ ಶೆಟ್ಟಿ ಸಾಧನೆ ಕುಂದಾಪುರಕ್ಕೆ ಹೆಮ್ಮೆ ತಂದಿದೆ.