ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ನಲ್ಲಿ ಈಗ ಹತ್ಯೆಗೂ ಮೊದಲು ಹಂತಕರು ಕಾದು ನಿಂತಿದ್ದರಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಬೆಳ್ಳಾರೆ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪಡೆದು ಪರಿಶೀಲನೆ ನಡೆಸುತ್ತಿದ್ದು, ಪ್ರವೀಣ್ ಅಂಗಡಿ ಸಮೀಪ ಬೈಕೊಂದು 40 ನಿಮಿಷಗಳ ಕಾಲ ಒಂದೇ ಸ್ಥಳದಲ್ಲಿ ನಿಂತಿದ್ದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಅನುಮಾನಾಸ್ಪದವಾಗಿ ಬೈಕ್ ಬಂದು ನಿಂತಿದ್ದಲ್ಲದೇ ಅನುಮಾನಸ್ಪದವಾಗಿ ಮೂವರು ಓಡಾಡುತ್ತಿದ್ದ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ.
ಸಿಸಿ ಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಯ ಪ್ರಕಾರ ರಾತ್ರಿ 8 ಗಂಟೆ 1 ನಿಮಿಷ 51 ಸೆಕೆಂಡ್ ಗೆ ಬೈಕ್ ಪ್ರವೀಣ್ ಅಂಗಡಿ ಬಳಿ ಬಂದಿದ್ದು, 8 ಗಂಟೆ 1 ನಿಮಿಷ 57 ಸೆಕೆಂಡ್ ಗೆ ಅಂಗಡಿಯಿದ 50 ಮೀಟರ್ ದೂರದಲ್ಲಿ ನಿಲ್ಲುತ್ತದೆ. ನಂತರ 8 ಗಂಟೆ 33 ನಿಮಿಷಕ್ಕೆ ಅಂಗಡಿ ಎದುರು ಹೋಗಿ ವಾಪಸ್ ಹಿಂದೆ ನಿಂತಿದ್ದ ಜಾಗಕ್ಕೆ ಬೈಕ್ ವಾಪಸಾಗುತ್ತದೆ. ಬಳಿಕ 8 ಗಂಟೆ 38 ನಿಮಿಷಕ್ಕೆ ಮತ್ತೆ ಅಂಗಡಿ ದಿಕ್ಕಿನತ್ತ ಸಾಗಿದ್ದು, 8 ಗಂಟೆ 40 ನಿಮಿಷಕ್ಕೆ ಅಂಗಡಿಯತ್ತ ಜನರು ಓಡಿ ಬಂದಿದ್ದಾರೆ.
ಹೀಗಾಗಿ ರಾತ್ರಿ 8.38 ರಿಂದ 8.40 ರ ಸಮಯದಲ್ಲಿ ಹತ್ಯೆ ನಡೆದಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದ್ದು, ಆ ಬೈಕ್ ನಲ್ಲಿ ಬಂದಿದ್ದವರೇ ಕೊಲೆಗಾರರಾ ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.