ಬಂಟ್ವಾಳ: ಇಲ್ಲಿನ ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮನಾಥೇಶ್ವರ ದೇವರ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕವು ಜ.21ರಿಂದ 29ರವರೆಗೆ ಪೊಳಲಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ಶಂತ್ರಿ ಅವರ ನೇತೃತ್ವದಲ್ಲಿ ಜರಗಲಿದೆ.
ಈ ಕುರಿತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಕೃಷ್ಣಕುಮಾರ ಪೂಂಜ ಅವರು ದೇವಸ್ಥಾನದಲ್ಲಿ ಜರಗುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ. ಜ.21 ಭಾನುವಾರದಂದು ಮಧ್ಯಾಹ್ನ 3ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಸಂಜೆ 6ರಿಂದ ಉಗ್ರಾಣ ಮುಹೂರ್ತ, ನಂತರ ಧಾರ್ಮಿಕ ಸಭೆ ನಡೆಯಲಿದೆ. ಜ.22 ಸೋಮವಾರದಂದು ಬೆಳಗ್ಗೆ 8ರಿಂದ ವೈದಿಕ ಕಾರ್ಯಕ್ರಮ. ಮಧ್ಯಾಹ್ನ 3ರಿಂದ ಭಜನೆ, ಸಾಂಸ್ಕೃತಿಕ ಕಾರ್ಯ ಕ್ರಮದ ಅಂಗವಾಗಿ ಸಂಜೆ 6ರಿಂದ ನೃತ್ಯಮ್ ಗುರುಪುರ ತಂಡದಿಂದ ನಿತ್ಯಾರ್ಪಣಂ ಪ್ರದರ್ಶನ ಗೊಳ್ಳಲಿದೆ. ಜ.23 ಮಂಗಳವಾರದಂದು ಬೆಳಗ್ಗೆ 7ರಿಂದ ಮೃತ್ಯುಂಜಯ ಹೋಮ, ಗಣ ಹೋಮ, ಇತರ ವೈದಿಕ ಕಾರ್ಯಕ್ರಮ, ಮಧ್ಯಾಹ್ನ 3ರಿಂದ ಭಜನೆ, ಸಂಜೆ 6 ರಿಂದ ಶಿವದೂತೆ ಗುಳಿಗೆ ನಾಟಕ ಜರಗಲಿದೆ.
ಜ.24 ಬುಧವಾರದಂದು ಬೆಳಗ್ಗೆ 7ರಿಂದ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ವೈದಿಕ ಕಾರ್ಯಕ್ರಮ. ಮಧ್ಯಾಹ್ನ ಭಜನೆ, ಸಂಜೆ ಗಂಟೆ 6ರಿಂದ ಶ್ರೀಶಾರದಾ ಅಂಧ ಕಲಾವಿದರ ಗೀತ ಗಾಯನ ಕಲಾ ಸಂಘದಿಂದ ಭಕ್ತಿ ಗಾನ ಸುಧಾ, ಜ.25 ಗುರುವಾರದಂದು ಬೆಳಗ್ಗೆ 7ರಿಂದ 8.10ರ ವರೆಗೆ ಶ್ರೀ ದೇವರ ಪ್ರತಿಷ್ಠೆ ಜೀವ ಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ. ಬೆಳಗ್ಗೆ 10ರಿಂದ ಯಕ್ಷ ಗಾನ ವೈಭವ, ಮಧ್ಯಾಹ್ನ 3ರಿಂದಭಜನೆ, ಸಂಜೆ 5.30 ರಿಂದ ಧಾರ್ಮಿಕ ಸಭೆ, ಸಂಜೆ 6ರಿಂದ ಭರತನಾಟ್ಯ ನಡೆಯಲಿದೆ.
ಜ.26 ಶುಕ್ರವಾರದಂದು ಬೆಳಗ್ಗೆ 7ರಿಂದ ವೈದಿಕ ಕಾರ್ಯಕ್ರಮ. ಸಂಜೆ 6ರಿಂದ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ‘ಭಸ್ಮಾಸುರ ಮೋಹಿನಿ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಪ್ರದರ್ಶನವಿದೆ. ಜ.27 ಶನಿವಾರದಂದು ಬೆಳಿಗ್ಗೆ 7ರಿಂದ ವೈದಿಕ ಕಾರ್ಯಕ್ರಮ, ಮಧ್ಯಾಹ್ನ 3ರಿಂದ ಭಜನೆ, ಸಂಜೆ 5 ರಿಂದ ಅನುದಾನಿತ ಹಿ.ಪ್ರಾ. ಶಾಲೆ ಅಮ್ಮುಂಜೆ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7ರಿಂದ ವಿಠಲ ನಾಯಕ್ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಜ.28 ಭಾನುವಾರದಂದು ಬ್ರಹ್ಮಕಲಶದ ಸಂಭ್ರಮ ಜ.28ರಂದು ಬೆಳಗ್ಗೆ 7ರಿಂದ ಕಲಶಾಭಿಷೇಕ ಆರಂಭ. ಬೆಳಿಗ್ಗೆ 10.05ರ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, 11ರಿಂದ ಧಾರ್ಮಿಕ ಸಭೆ, ಮಧ್ಯಾಹ್ನ 12ರಿಂದ ಮಹಾಪೂಜೆ, ಪಲ್ಲ ಪೂಜೆ, ಅನ್ನ ಸಂತರ್ಪಣೆ. 3ರಿಂದ ಭಜನೆ, ಸಂಜೆ 6.30ರಿಂದ ರಂಗ ಪೂಜೆ, ಬಲಿ ಉತ್ಸವ, ಜ.29ರಂದು ಬೆಳಗ್ಗೆ 8.30 ರಿಂದ ಸಂಪ್ರೋಕ್ಷಣೆ, ಮಹಾಪೂಜೆ ನಡೆಯಲಿದೆ.
ಬ್ರಹ್ಮಕಲಶದ ಪ್ರತಿದಿನ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಅನ್ನಪ್ರಸಾದ, ಸಂಜೆಯ ಉಪಹಾರ ರಾತ್ರಿಯ ಅನ್ನ ಪ್ರಸಾದ ವಿತರಣೆ ನಿರಂತರ ನಡೆಯಲಿದೆ ಎಂದರು.