
ಬೆಳ್ತಂಗಡಿ: ಮಂಗಳೂರು, ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆಯ ಅಡಿಕೆ ವರ್ತಕರ ಜಿಲ್ಲಾ ಸಂಘಟನೆಯ ನೂತನ ಅಧ್ಯಕ್ಷರಾಗಿ ಮಡಂತ್ಯಾರು ಪ್ರಶಾಂತ್ ಶೆಟ್ಟಿ ಮೂಡಯೂರು ಅವಿರೋಧ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ತೇಜಸ್ವಿ ರಾಜ್ ಆಯ್ಕೆಯಾದರು.
ಸೆ.2ರಂದು ಬಿ. ಸಿ. ರೋಡ್ ನ ರಂಗೋಲಿ ಭವನದಲ್ಲಿ ಅಡಿಕೆ ವರ್ತಕರ ಜಿಲ್ಲಾ ಸಂಘಟನೆಯ ಸಭೆಯು ಮೊಟ್ಟ ಮೊದಲ ಬಾರಿಗೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಅಡಿಕೆ ವರ್ತಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದರು.
ಅಡಿಕೆ ವರ್ತಕರ ಜಿಲ್ಲಾ ಸಂಘಟನೆಯ ಕೋಶಾಧಿಕಾರಿಯಾಗಿ ಸಲೀಂ, ಉಪಾಧ್ಯಕ್ಷರಾಗಿ ಜಲೇಶ್ ಜೀವನಿ ನಿರಾಬ್, ಭವಿನ್ ಕಮಣಿ, ಜೊತೆ ಕಾರ್ಯದರ್ಶಿಯಾಗಿ ಸುದೀಪ್ ಶೆಟ್ಟಿ ಮೂಡಯೂರು, ಧರ್ನಪ್ಪ ಅಂಬಲ, ಜಿಲ್ಲೆಯ ವಿವಿಧ ತಾಲೂಕಿನಿಂದ ಹಾಗೂ 32 ಮಂದಿ ನಿರ್ದೇಶಕರಿಗಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ್ ಶೆಟ್ಟಿ ಮೂಡಯೂರು ಮಾತನಾಡಿ, “ಜಿಲ್ಲೆಯಲ್ಲಿ ಅಡಿಕೆ ವರ್ತಕರು ಎದುರಿಸುತ್ತಿರುವ ಸಮಸ್ಯೆ ಕುರಿತು ಸಂಘಟಕರಾಗಿ ಅಡಿಕೆ ವರ್ತಕರು ಹಿತಾಸಕ್ತಿ ಕಾಪಾಡುವ ಕೆಲಸಗಳು ನಡೆಯಲಿವೆ” ಎಂದು ತಿಳಿಸಿದರು.


