ಬೆಂಗಳೂರು: ಪಿಪಿಪಿ ಮಾದರಿಯಲ್ಲಿ ಮಂಗಳೂರಿನ ಕಡಲ ತೀರದಲ್ಲಿ ಅಕ್ವೇರಿಯಂ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಇಂದು ಸರ್ಕಾರಿ ಮತ್ಸ್ಯಾಲಯದ ಆಧುನೀಕರಣ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ವೇಳೆ ಸಿಎಂ ಈ ವಿಷಯ ಪ್ರಕಟಿಸಿದ್ದಾರೆ.
ಸಿಂಗಾಪುರ, ದುಬೈ, ಯೂರೋಪ್ಗಳಲ್ಲಿರುವ ಟನಲ್ ಅಕ್ವೇರಿಯಂಗಳಂತೆ ಮಕ್ಕಳಿಗೆ ಹೆಚ್ಚಿನ ಆಕರ್ಷಣೆ ಉಂಟು ಮಾಡುವ ರೀತಿಯಲ್ಲಿ ನಿರ್ಮಾಣವಾಗಲಿದೆ ಎಂಬ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದ್ದಾರೆ.
ಇದೇ ವೇಳೆ, ಕರ್ನಾಟಕದಲ್ಲಿ ಮೀನುಗಾರಿಕೆಯಲ್ಲಿ ವಿಫುಲ ಅವಕಾಶಗಳಿದೆ. ಒಳನಾಡು ಮೀನುಗಾರಿಕೆಗೆ ಸ್ಪಷ್ಟ ನೀತಿ ಇಲ್ಲ. ಕರಾವಳಿ ಮೀನುಗಾರಿಕೆಗೂ, ಒಳನಾಡು ಮೀನುಗಾರಿಕೆಗೆ ವ್ಯತ್ಯಾಸಗಳಿವೆ. ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ, ಮೀನು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಲ್ಲದೇ ಸ್ಥಳೀಯ ಉತ್ಪಾದನೆಗೊಂಡು ಸ್ಥಳೀಯರಿಗೆ ಲಾಭ ಸಿಗಬೇಕಿರುವುದು ಮುಖ್ಯ. ಮೀನುಗಾರಿಕೆಯೂ ಕೃಷಿಯಿದ್ದಂತೆ, ಸಮಗ್ರ ಕೃಷಿಯಲ್ಲಿ ಮೀನುಗಾರಿಕೆ, ಹೈನುಗಾರಿಕೆ, ಕುರಿ ಮತ್ತು ಹಂದಿ ಸಾಕಾಣಿಕೆ, ಆಹಾರ ಸಂಸ್ಕರಣೆ, ಮಾರುಕಟ್ಟೆ ಸೇರಿದಂತೆ ಎಲ್ಲವೂ ಒಳಗೊಂಡಿರುತ್ತದೆ. ಈ ಎಲ್ಲ ಅಂಶಗಳನ್ನು ಜೋಡಿಸುವ ಮೂಲಕ ಮೀನುಗಾರಿಕೆ ವಲಯ ಹಾಗೂ ಮೀನುಗಾರರ ಅಭಿವೃದ್ಧಿ ಗೆ ಮೀನುಗಾರಿಕೆ ಇಲಾಖೆ ಗಮನಹರಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.
ರಾಜ್ಯದಲ್ಲಿ 330 ಕಿ.ಮೀ. ಕರಾವಳಿ ಪ್ರದೇಶವಿದ್ದು, ಮೀನುಗಾರಿಕೆ ಹೆಚ್ಚಿಸಿ, ಸಂಸ್ಕರಿಸಿ, ಮೀನು ರಫ್ತಿಗೆ ವಿಫುಲ ಅವಕಾಶಗಳಿವೆ. ಬರುವ ದಿನಗಳಲ್ಲಿ ಮೀನುಗಾರಿಕೆ ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತಿಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.


