ಕುದುರೆಮುಖ: ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವಿದ್ಯುತ್ ವಂಚಿತ ಆದಿವಾಸಿಗಳಿಗೆ ಎರಡು ವರ್ಷಗಳ ಹಿಂದೆ ಮೆಸ್ಕಾಂ ಇಲಾಖೆ ನೀಡಿದ ಸೌಭಾಗ್ಯ ಸೋಲಾರ್ ಸಿಸ್ಟಮ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದರಲ್ಲಿ ಲಕ್ಷಾಂತರ ರೂಪಾಯಿ ಹಗರಣ ನಡೆದಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಗ್ರಹಿಸಿದೆ.

ಬೆಳ್ತಂಗಡಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 9 ಗ್ರಾಮಗಳಲ್ಲಿ 94 ಕುಟುಂಬಗಳಿಗೆ ಸೌಭಾಗ್ಯ ಯೋಜನೆಯಡಿ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ. ಎರಡು ವರ್ಷಗಳ ಹಿಂದೆ ಅಳವಡಿಸಿದ ಕೇವಲ ಒಂದೇ ವಾರದಲ್ಲಿ ಕೆಟ್ಟು ಹೋಗಿದೆ. ಈ ಬಗ್ಗೆ ನಮ್ಮ ಗಮನಕ್ಕೆ ಬಂದ ನಂತರ ಹಂತ ಹಂತವಾಗಿ ಮೆಸ್ಕಾಂ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಮನವಿ, ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಗುತ್ತಿಗೆದಾರ ಕಂಪನಿಯ ಇಂಜಿನಿಯರ್, ಕೆಲಸಗಾರರು ದುರಸ್ತಿ ಮಾಡಿದ ಒಂದು ವಾರದ ಬಳಿಕ ಮತ್ತೆ ಕತ್ತಲಲ್ಲಿ ಬದುಕುವಂತಾಗಿದೆ. 50 ಸಾವಿರ ಘಟಕ ವೆಚ್ಚದ ಸೌಭಾಗ್ಯ ಸೋಲಾರ್ ವಿದ್ಯುತ್ ಘಟಕವನ್ನು ಕಳೆದ ಎರಡು ವರ್ಷಗಳಲ್ಲಿ ಹತ್ತಾರು ಬಾರಿ ದುರಸ್ತಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಕಳಪೆ ಗುಣಮಟ್ಟದ ಸೋಲಾರ್ ಸಿಸ್ಟಮ್ ಆಗಿದ್ದು, ಆದಿವಾಸಿ ಸಮುದಾಯವನ್ನು ವಂಚಿಸಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾವೂರು ಗ್ರಾಮದ ಮಲೆಕುಡಿಯ ಸಮುದಾಯದ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸುಳ್ಳು ಬರವಸೆ ನೀಡಿದ ಬಿಜೆಪಿಗರು ವಿದ್ಯುತ್ ಮೀಟರ್ ಅಳವಡಿಸಿ ಹೋದಾವರು ಎರಡುವರೆ ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಶಾಸಕ ಹರೀಶ್ ಪೂಂಜಾ ಆದಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬದಲಾಗಿ ರಾಜಕೀಯ ಗಿಮಿಕ್ ಮಾಡುವುದನ್ನು ಮೊದಲು ನಿಲ್ಲಿಸಲಿ. ದಲಿತ, ಆದಿವಾಸಿಗಳನ್ನು ರಬ್ಬರ್ ಸ್ಟಾಂಪ್ ನಂತೆ ಚುನಾವಣೆಯಲ್ಲಿ ಬಿಜೆಪಿ ಬಳಸಿಕೊಳ್ಳುವುದಕ್ಕೆ ಇದು ಉತ್ತಮ ಉದಾಹರಣೆ ಎಂದು ಸಂಘಟನೆಯ ಅಧ್ಯಕ್ಷ ವಸಂತ ನಡ, ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಯಿಲ ಹೇಳಿದ್ದಾರೆ.
ಬೆಳ್ತಂಗಡಿ ಶಾಸಕರಿಂದಿಡಿದು , ಸಂಸದ , ರಾಜ್ಯ, ಕೇಂದ್ರ ಸರ್ಕಾರಗಳು ಒಂದೇ ಪಕ್ಷದಲ್ಲಿದ್ದರೂ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿಗಳು ರಸ್ತೆ, ವಿದ್ಯುತ್ ಇಲ್ಲದೆ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ವಾಸಿಸುತ್ತಿರುವುದು ನಾಚಿಕೆಗೇಡಿನ ಎಂದಿರುವ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಇಂಧನ ಸಚಿವರು ಸೌಭಾಗ್ಯ ಸೋಲಾರ್ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.