ಬೆಂಗಳೂರು : ಸುಮ್ಮನೆ ಇರಲಾರದವನು ಇರುವೆ ಬಿಟ್ಟುಕೊಂಡ ಎಂಬಂತಾಗಿದೆ ಸದ್ಯ ಡ್ರೋನ್ ಪ್ರತಾಪ್ ಅವರ ಸ್ಥಿತಿ. ಇಷ್ಟು ದಿನ ತಾನೇ ಬುದ್ಧಿವಂತ ಅಂದುಕೊಂಡು ಕಂಡ ಕಂಡೆಲ್ಲಾ ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿಕೊಂಡು ಬಂದ ಪ್ರತಾಪ್ ಈಗ ಕೈ ಸಿಗದಂತೆ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಡ್ರೋನ್ ಪ್ರತಾಪ್ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.
ಸದ್ಯ ಕೈಗೆ ಸಿಗದೇ ನಾಪತ್ತೆಯಾಗಿರುವ ಪ್ರತಾಪ್ ಅವರನ್ನು ಹುಡುಕೋದಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಮಂಡ್ಯ ಅಥವಾ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತಾಪ್ ಅಡಗಿರುವ ಸಾಧ್ಯತೆ ಇದ್ದು, ಈತನಿಗಾಗಿ ಪೊಲೀಸರು ಮೂರು ತಂಡಗಳಿಂದ ಶೋಧ ಕೈಗೊಂಡಿದ್ದಾರೆ. ಡ್ರೋನ್ ಪ್ರತಾಪ್ ಇದೇ 15 ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದ ಹಿನ್ನೆಲೆಯಲ್ಲಿ ನಗರದ ತಲಘಟ್ಟಪುರದ ಅಪಾರ್ಟ್ ಮೆಂಟ್ವೊಂದರಲ್ಲಿ ಪ್ರತಾಪ್ ಹೋಂ ಕ್ವಾರಂಟೈನ್ ಆಗಿದ್ದ. ನಿಯಮದ ಪ್ರಕಾರ ಆತ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿತ್ತು. ಆದರೆ, ಆತ ಖಾಸಗಿ ಚಾನಲ್ ನ ಸಂದರ್ಶನಕ್ಕೆ ಹಾಜರಾಗಿದ್ದ.
ಹೀಗಾಗಿ ತಲಘಟ್ಟಪುರ ಪೊಲೀಸರು ಮತ್ತು ಬಿಬಿಎಂಪಿ ಹೋಂ ಕ್ವಾರಂಟೈನ್ ಸಿಟಿಜನ್ ಸ್ಕ್ವಾಡ್ ಪ್ರತಾಪ್ಗಾಗಿ ಹುಡುಕಾಟ ನಡೆಸುತ್ತಿದೆ. ಡ್ರೋಣ್ ಪ್ರತಾಪ್ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಸದ್ಯ ಪ್ರತಾಪ್ ಯಾರ ಸಂಪರ್ಕಕ್ಕೂ ಸಿಗದೇ ಎಸ್ಕೇಪ್ ಆಗಿದ್ದು, ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಈತ ಮಂಡ್ಯ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಪ್ರತಾಪ್ ಇದ್ದಾನೆ ಎನ್ನುವ ಮಾಹಿತಿ ಇದೆ. ಹೀಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಹಾಗಾಗಿ ಇದೆಲ್ಲಾ ಬೇಕಿತ್ತಾ ಗುರು ಎಂಬಂತಾಗಿದೆ ಪ್ರತಾಪ್ ಸ್ಥಿತಿ