ಉಡುಪಿ: ಅಕ್ರಮ ಕಸಾಯಿ ಖಾನೆ ಮೇಲೆ ದಾಳಿ ಮಾಡಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ಉಡುಪಿಯ ಕಾಪುವಿನ ಉಚ್ಚಿಲದಲ್ಲಿ ನಡೆದಿದೆ.
ಉಚ್ಚಿಲ ಭಾಸ್ಕರ ನಗರ ಜುಮ್ಮಾ ಮಸೀದಿ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಆರೋಪಿಗಳು, ಒಂದು ಜೀವಂತ ಹಸು, ಮಾಂಸಕ್ಕೆ ಕಡಿಯಲಾದ ಹಸು ಹಾಗೂ ಮಾರಾಟಕ್ಕೆ ತಯಾರಾಗಿ ಇರಿಸಲಾಗಿದ್ದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಚ್ಚಿಲ ಭಾಸ್ಕರ ನಗರದಲ್ಲಿ ಸಬಾನ್ ಎಂಬವರ ಮನೆಯಲ್ಲಿ ಈ ಕಸಾಯಿಖಾನೆ ಇತ್ತು. ಖಚಿತ ಮಾಹಿತಿ ಪಡೆದ ಪೊಲೀಸರು ಈ ಅಕ್ರಮ ಅಡ್ಡೆಗೆ ದಾಳಿ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳಾದ ಮಹಮ್ಮದ್ ರಫೀಕ್, ಇಲಿಯಾಸ್, ಮಹಮ್ಮದ್ ಮೊಹಿಯುದ್ದೀನ್, ಮೊಯ್ದಿನಬ್ಬ ಎಂಬ ನಾಲ್ವರನ್ನು ಪೊಲೀಸರು ಬಂಽಸಿದ್ದಾರೆ, ಪ್ರಮುಖ ಆರೋಪಿ ದಿಯು ರಫೀಕ್ ಎಂಬಾತ ಪರಾರಿಯಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಪಡುಬಿದ್ರಿ ಪಿಎಸ್ಐ ಪುರುಷೋತ್ತಮ ಹಾಗೂ ಪಡುಬಿದ್ರಿ ಮತ್ತು ಕಾಪು ವೃತ್ತ ನಿರೀಕ್ಷಕರ ಕಚೇರಿ ಸಿಬಂದಿ ಭಾಗವಹಿಸಿದ್ದರು.