ಕೊಕ್ಕಡ: ಹಣವನ್ನು ಪಣವಾಗಿ ಇಟ್ಟುಕೊಂಡು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಪೇಟೆಯಿಂದ ಪಟ್ರಮೆಗೆ ಹೋಗುವ ದಾರಿಯಲ್ಲಿರುವ ಅಡೈ ಸರಕಾರಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಜುಗಾರಿ ಅಡ್ಡೆಗೆ ಧರ್ಮಸ್ಥಳ ಠಾಣೆಯ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
ಸರ್ಕಾರಿ ಗುಡ್ಡೆಯಲ್ಲಿ ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಧರ್ಮಸ್ಥಳ ಠಾಣೆಯ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ನೇತೃತ್ವದ ಪೋಲೀಸರ ತಂಡ ದಾಳಿ ನಡೆಸಿದಾಗ ಅರಣ್ಯ ಪ್ರದೇಶದಲ್ಲಿ ಟರ್ಪಾಲ್ನ್ನು ಕಾಡು ಮರದ ಕೊಂಬೆಗೆ ಕಟ್ಟಿ ನೆಲದ ಮೇಲೆ ಪ್ಲಾಸ್ಟಿಕ್ ಹಾಸಿ ಜನರು ಸುತ್ತಲೂ ಕುಳಿತು ಕೊಂಡು ಕ್ಯಾಂಡಲ್ ಬೆಳಕಿನ ಸಹಾಯದಿಂದ ಜುಗಾರಿ ಆಟ ಆಡುತ್ತಿರುವುದು ಬಂದಿದೆ.
ಪೋಲೀಸರ ಆಗಮಿಸಿದನ್ನು ಗಮನಿಸಿದ ಕೂಡಲೇ ಆಡುತ್ತಿದ್ದ ಎಲ್ಲರು ಓಡಿ ಹೋಗಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಓಡಿ ಹೋಗುತ್ತಿದ್ದ ಸುಧಾಕರ, ಅಬ್ದುಲ್ ಖಾದರ್, ಸುಬ್ರಾಯ ಗೌಡ, ಅಬ್ದುಲ್ ಲತೀಫ್ ರನ್ನು ವಶಕ್ಕೆ ಪಡೆದಿದ್ದಾರೆ.
ಹಾಗೆಯೆ ಘಟನೆಯಲ್ಲಿ ತಪ್ಪಿಸಿಕೊಂಡಿರುವ ಆರೋಪಿಗಳಾದ ರತ್ನಾಕರ, ಫಾರೂಕ್ ಉಪ್ಪಿನಂಗಡಿ, ಸಾದೀಕ್, ಮಹೇಶ ಪೊಟ್ಲಡ್ಕ, ಅಬ್ಬುಂಞ, ರೋಹಿತ್ ಆಲಂಕಾರು, ರಾಜು, ಅಶ್ವಥ್ ಭುವನೇಶ್ವರ್ ಕಳೆಂಜ, ರೋಹಿತ್ ಕಳೆಂಜ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳಿಂದ ಮತ್ತು ಘಟನಾ ಸ್ಥಳದಿಂದ ಜುಗಾರಿ ಆಟಕ್ಕೆ ಉಪಯೋಗಿಸಿದ ರೂಪಾಯಿ 6,185/- ನಗದು, 52 ಇಸ್ಪೀಟ್ ಎಲೆ, ಮತ್ತು ಮತ್ತು ನಾಲ್ಕು ತುಂಡು ಕ್ಯಾಂಡಲ್ ಮತ್ತು ಅಡಿಗೆ ಹಾಸಲು ಬಳಸಿದ ಒಂದು ಪ್ಲಾಸ್ಟಿಕ್ ಸಾಮಾಗ್ರಿ, ಮಳೆನೀರು ಬೀಳದಂತೆ ಕಟ್ಟಿದ ಪ್ಲಾಸ್ಟಿಕ್ ಟರ್ಪಾಲ್ ಮತ್ತು ಕೆಎ-04-ಎಂಜೆ-1755 ನೋಂದಾಯಿತ ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ.